ಶೀಘ್ರ ಐಟಿ, ಹಾರ್ಡ್ ವೇರ್, ಸೆಮಿ ಕಂಡಕ್ಟರ್ ಪಾಲಿಸಿ
ಬೆಂಗಳೂರು, ಆ.8: ರಾಜ್ಯದಲ್ಲಿ ಅತಿ ಶೀಘ್ರದಲ್ಲಿ ಮಾಹಿತಿ ತಂತ್ರಜ್ಞಾನ ಪಾಲಿಸಿ, ಹಾರ್ಡ್ವೇರ್ ಪಾಲಿಸಿ ಹಾಗೂ ಸೆಮಿ ಕಂಡಕ್ಟರ್ ಪಾಲಿಸಿಯನ್ನು ರಾಜ್ಯ ಸರ್ಕಾರ ಪ್ರಕಟಿಸಲಿದೆ. ಆರೋಗ್ಯ ಕ್ಷೇತ್ರದಲ್ಲಿರುವ ಎಲ್ಲ ಬಂಡವಾಳಗಾರರನ್ನು ಆಕರ್ಷಿಸಿ ರಾಜ್ಯದಲ್ಲಿ ಬಂಡವಾಳ ತೊಡಗಿಸುವ ಮೂಲಕ ಗ್ರಾಮೀಣರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಮೂಲಕ ಗ್ರಾಮೀಣರು ನಗರ ಪ್ರದೇಶಕ್ಕೆ ಉದ್ಯೋಗ ವಲಸೆ ಹೋಗುವುದನ್ನು ತಡೆಯುವ ಯತ್ನ ಮಾಡಲಾಗುತ್ತಿದೆ.
ಅಲ್ಲದೆ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 150 ಹೊಸ ಕೈಗಾರಿಕಾ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ. ಪ್ರತೀ ಕೈಗಾರಿಕಾ ಕೇಂದ್ರ 50 ಎಕರೆ ಪ್ರದೇಶದಲ್ಲಿದ್ದು ನಾಲ್ಕು ವರ್ಷಗಳಲ್ಲಿ ಈ ಎಲ್ಲ 150 ಕೈಗಾರಿಕಾ ಕೇಂದ್ರ ಆರಂಭಗೊಳ್ಳಲಿವೆ. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದು ಮೂರು ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಆಕರ್ಷಿಸುವ ಮೂಲಕ 10 ಲಕ್ಷ ಜನರಿಗೆ ಉದ್ಯೋಗಾವಕಾಶ ದೊರಕಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀರಂಗಪಟ್ಟಣ ಶಾಸಕ ಎ ಬಿ ರಮೇಶ್ ಬಾಬು ಬಂಡಿಸಿದ್ದೇಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಕೆ ಟಿ ಶ್ರೀಕಂಠೇಗೌಡ ಅವರು ರಾಜ್ಯದ ಗ್ರಾಮೀಣರಿಗೆ ಮಾಹಿತಿ ತಂತ್ರಜ್ಞಾನದ ಉದ್ಯೋಗಾವಕಾಶ ದೊರಕಿಸಲು ಆರಂಭಿಸಿರುವ ರಾಜ್ಯ ಸರ್ಕಾರದ ಕ್ರಮ ಶ್ಲಾಘನೀಯ. ಇದು ರಾಜ್ಯದ ಎಲ್ಲೆಡೆ ತ್ವರಿತವಾಗಿ ಹೆಚ್ಚಲಿ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸರ್ಕಾರದ ಮಾಹಿತಿ,ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಪಿ ಮನೋಳಿ ಅವರು ಮಾತನಾಡಿ ರಾಜ್ಯ ಸರ್ಕಾರವು ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಗ್ರಾಮೀಣ ಹೊರಗುತ್ತಿಗೆ ಸೇವಾ ಕೇಂದ್ರ (ಬಿಪಿಓ) ಆರಂಭಿಸುವ ಮೂಲಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳು ಗ್ರಾಮೀಣರಿಗೂ ದೊರಕಿಸುವ ನವೀನ ಪ್ರಯತ್ನ ಮಾಡಿದೆ. ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಡೆಯುವ ಈ ಕಾರ್ಯದಿಂದ ಲಕ್ಷಾಂತರ ಉದ್ಯೋಗಗಳು ಗ್ರಾಮೀಣ ವಿದ್ಯಾವಂತರಿಗೆ ದೊರಕಲಿದೆ ಎಂದರು.
ಖ್ಯಾತ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಡಾ: ಶ್ರೀಧರ್ ಮಟ್ಟಾ ಅವರು ಮಾತನಾಡಿ ದೇಶದಲ್ಲಿ ಐಟಿ, ಬಿಟಿ ಕ್ಷೇತ್ರದಲ್ಲಿ ಹದಿನಾರು ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆದಿದೆ. ಗ್ರಾಮೀಣ ಪ್ರದೇಶಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಾವಕಾಶದ ಬಾಗಿಲು ತೆರೆದ ರಾಜ್ಯ ಸರ್ಕಾರದ ಕ್ರಮ ಶ್ಲಾಘನೀಯ ಎಂದು ಹೇಳಿದರು.
ಸಮಾರಂಭದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಬಿ ಸಂದೇಶ, ಕಿಟ್ಟನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯಕುಮಾರ್ ಹಾಗೂ ಸ್ಥಳೀಯ ಬಿಪಿಓ ಸಂಸ್ಥೆಯ ವೇಣುಗೋಪಾಲ್ ಸಮಾರಂಭದಲ್ಲಿ ಹಾಜರಿದ್ದರು.
(ದಟ್ಸ್ ಕನ್ನಡ ವಾರ್ತೆ)