ಪ್ರತಿಮೆ ಮುಂದೆ ರೈತರ ಮರೆತ ಮುಖ್ಯಮಂತ್ರಿ : ಎಚ್ಡಿಕೆ
ರಾಮನಗರ, ಆ. 8 : ರಾಜ್ಯದ ಸುಮಾರು 15 ಜಿಲ್ಲೆಗಳಲ್ಲಿ ರೈತಾಪಿ ವರ್ಗ ಬರಗಾಲ ಎದುರಿಸುತ್ತ ಸಂಕಷ್ಟಮಯ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ರೈತರ ಸಮಸ್ಯೆ ಬಗೆಹರಿಸುವುದರ ಬದಲಾಗಿ ತಿರುವಳ್ಳುವರ್ ಪ್ರತಿಮೆ ಅನಾವರಣ ವಿಚಾರದಲ್ಲೇ ಹೆಚ್ಚಿನ ಸಮಯವನ್ನು ವ್ಯಯಮಾಡಿದ್ದಾರೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವ ಕುಮಾರಸ್ವಾಮಿ ತಿರುವಳ್ಳುವರ್ ಪ್ರತಿಮೆ ಅನಾವರಣ ವಿವಾದದ ಬಗ್ಗೆ ಮಾತನಾಡಿದರು. ತಿರುವಳ್ಳುವರ್ ಪ್ರತಿಮೆ ಅನಾವರಣ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ದೊಡ್ಡಮಟ್ಟದ ಪ್ರಚಾರ ಪಡೆದುಕೊಂಡು ವಿವಾದ ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳ ಮಟ್ಟದಲ್ಲಿ ತೀರ್ಮಾನವಾಗಬೇಕಾದ ಪ್ರತಿಮೆ ಅನಾವರಣ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ಗೊಂದಲ ಸೃಷ್ಟಿ ಮಾಡಿದ್ದಾರೆ. ಉಪಚುನಾವಣೆ ಮತ್ತು ಮುಂಬರುವ ಬಿಬಿಎಂಪಿ ಚುನಾವಣೆಗಳಲ್ಲಿ ತಮಿಳು ಸಮುದಾಯದ ಮತದಾರರನ್ನ ಓಲೈಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಪ್ರತಿಮೆ ಅನಾವರಣಕ್ಕಿಳಿದಿದ್ದಾರೆ. ಇದರಿಂದ ರಾಜ್ಯದಲ್ಲಿ ಅಶಾಂತಿ ಮೂಡುವುದಕ್ಕೆ ಮುಖ್ಯಮಂತ್ರಿಗಳೇ ಕಾರಣರಾಗಿದ್ದಾರೆಂದು ಕುಮಾರಸ್ವಾಮಿ ಟೀಕಿಸಿದರು.
ಜ್ವಲಂತ ಸಮಸ್ಯೆಗಳನ್ನ ಬಗೆಹರಿಸುವುದನ್ನು ಬಿಟ್ಟು ಕೇಂದ್ರ ಮಂತ್ರಿಗಳಿಗೆ ಯಾವುದೇ ಮಾಹಿತಿ ನೀಡದೇ ದೆಹಲಿಗೆ ಹೋಗಿ ಕಾಲವ್ಯಯಮಾಡಿರುವ ಮುಖ್ಯಮಂತ್ರಿಗಳ ನಡವಳಿಕೆ ಸಾಮಾನ್ಯ ತಿಳಿವಳಿಕೆಯಿಲ್ಲದ ಮುಖ್ಯಮಂತ್ರಿ ಎಂಬುದನ್ನು ಸಾಬೀತುಪಡಿಸಿದ್ದಾರೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಟೀಕೆ ಮಾಡಿದರು.