ರಾಮನಗರದಲ್ಲಿ ದೇವೇಗೌಡರ ಬಿರುಸಿನ ಪ್ರಚಾರ
ರಾಜಕೀಯವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೇರಲು ನಮ್ಮ ಕುಟುಂಬಕ್ಕೆ ರಾಮನಗರದ ಜನತೆ ಸದಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಜನತೆಯ ಆಶೀರ್ವಾದದಿಂದಲೇ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಆಡಳಿತ ನಡೆಸಲು ಸಾಧ್ಯವಾಯಿತು. ಈ ಬಾರಿಯೂ ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನ ಜಯಶೀಲರನ್ನಾಗಿಸುವಲ್ಲಿ ಕ್ಷೇತ್ರದ ಜನತೆ ಸಹಕರಿಸಿ ಕುಮಾರಸ್ವಾಮಿಯವರಿಗೆ ರಾಜಕೀಯವಾಗಿ ಶಕ್ತಿತುಂಬಬೇಕೆಂದು ದೇವೇಗೌಡರು ಮನವಿ ಮಾಡಿದರು.
ಕುಮಾರಸ್ವಾಮಿಯವರು ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿರುವುದು ಕ್ಷೇತ್ರದ ಪ್ರತಿ ವ್ಯಕ್ತಿಗೂ ಗೊತ್ತಿದೆ. ಕ್ಷೇತ್ರದಲ್ಲಿ ಇನ್ನು ಸಾಕಷ್ಟು ಅಭಿವೃದ್ದಿಗೊಳಿಸಬೇಕಾಗಿದೆ. ಆದ್ದರಿಂದ ಕುಮಾರಸ್ವಾಮಿಯವರು ಪ್ರತಿನಿಧಿಸಿರುವ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ನ್ನ ಗೆಲ್ಲಿಸುವ ಮೂಲಕ ಲೋಕಸಭೆಯಲ್ಲಿ ರೈತರಪರವಾದ ದನಿಯಾಗಿರಲು ಅವಕಾಶ ನೀಡಬೇಕು ಎಂದು ದೇವೇಗೌಡರು ವಿನಂತಿಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪ್ರಜಾಪ್ರಭುತ್ವದಲ್ಲಿ ಸ್ಥಾನಮಾನ ಸಿಗಬೇಕೆಂಬ ಸಂವಿಧಾನದ ವ್ಯವಸ್ಥೆಯನ್ನ ಜಾರಿಗೆ ತರುವ ನಿಟ್ಟಿನಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡಿ ಎಲ್ಲಾ ವರ್ಗ ಜಾತಿಯ ಜನತೆಗೆ ರಾಜಕೀಯ ಸ್ಥಾನಮಾನ ಮತ್ತು ಸಮಾನತೆಯನ್ನ ತರುವ ಪ್ರಾಮಾಣಿಕ ಪ್ರಯತ್ನವನ್ನ ನನ್ನ ಆಡಳಿತಾವಧಿಯಲ್ಲಿ ಮಾಡಿದ್ದೇನೆಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ರಾಜ್ಯದ ಗ್ರಾಮೀಣ ಪ್ರದೇಶಗಳಿಗೆ ವಿದ್ಯುಚ್ಛಕ್ತಿ ಸರಬರಾಜು ಮಾಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೆಲೆಏರಿಕೆ, ಚುನಾವಣಾ ಪ್ರಚಾರದ ಪ್ರಣಾಳಿಕೆಯ ಆಶೋತ್ತರಗಳನ್ನ ಈಡೇರಿಸದ ಬಿಜೆಪಿ ಸರ್ಕಾರ ಕೇವಲ ಪೊಳ್ಳುಭರವಸೆಗಳನ್ನ ನೀಡುತ್ತಾ ಮುಂದುವರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದಲ್ಲಿ ಒಂದಲ್ಲಾ ಒಂದು ಸಮಸ್ಯೆಗಳು ಸೃಷ್ಟಿಯಾಗುತ್ತಲೇ ಇವೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯತೆಯ ಕೊರತೆ ಎದ್ದುಕಾಣುತ್ತಿರುವುದರಿಂದ ರಾಜ್ಯದ ಅಭಿವೃದ್ದಿಯಾಗಲು ಸಾಧ್ಯವಾಗುತ್ತಿಲ್ಲವೆಂದು ದೇವೇಗೌಡರು ಹೇಳಿದರು.
ದೇವೇಗೌಡರ ಚುನಾವಣಾ ಪ್ರಚಾರಕ್ಕೆ ಸಾಥ್ ನೀಡಿದ ಪಿ.ಜಿ.ಆರ್.ಸಿಂಧ್ಯಾರವರು ಮಾತನಾಡಿ, ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ 8 ದಿನಗಳ ಕಾಲ ಜೆಡಿಎಸ್ ಅಭ್ಯರ್ಥಿಗಳ ಪರ ನಿರಂತರ ಚುನಾವಣಾ ಪ್ರಚಾರ ನಡೆಸುವುದರ ಮೂಲಕ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಕೈಬಲ ಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ದೇವೇಗೌಡರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಾದ್ಯಾಂತ ಪಕ್ಷದ ಅಭ್ಯರ್ಥಿ ಎಂ.ಸಿ.ಅಶ್ವಥ್ ಪರ ಶನಿವಾರ ಮತ್ತು ಭಾನುವಾರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಪ್ರಚಾರದ ಸಂಧರ್ಭದಲ್ಲಿ ಅಭ್ಯರ್ಥಿ ಕೆ.ರಾಜು, ತಾಲ್ಲೂಕ್ ಜೆಡಿಎಸ್ ಅಧ್ಯಕ್ಷ ಕೂಟಗಲ್ ದೇವೇಗೌಡ, ನಗರಸಭಾಧ್ಯಕ್ಷ ಸೋಮಶೇಖರ್ರಾವ್, ಸದಸ್ಯರಾದ ಚಿಕ್ಕವೀರೇಗೌಡ, ನಾಗರಾಜು, ಉಮೇಶ್, ನರೇಂದ್ರ, ಮುಕುಂದ್ರಾಜ್, ಅಬ್ದುಲ್ಅಜೀಮ್, ಮುಂತಾದ ಮುಖಂಡರುಗಳು ಹಾಜರಿದ್ದರು.