ಗ್ರಾಮೀಣ ಹೊರಗುತ್ತಿಗೆ ಸೇವಾ ಕೇಂದ್ರಕ್ಕೆ ಚಾಲನೆ
ಬೆಂಗಳೂರು, ಆ. 7 : ಸರ್ಕಾರದ ನಂತರ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಅತೀ ಹೆಚ್ಚಿನ ಉದ್ಯೋಗಗಳನ್ನು ನೀಡುವ ಕ್ಷೇತ್ರವಾಗಿದೆ. ಕರ್ನಾಟಕ ರಾಜ್ಯದಲ್ಲಿ ಐಟಿ ಹಾಗೂ ಬಿಪಿಒ ಕ್ಷೇತ್ರಗಳಲ್ಲಿ 5 ಲಕ್ಷಗಳಿಗಿಂತ ಹೆಚ್ಚು ಜನ ಉದ್ಯೋಗ ಪಡೆದಿದ್ದಾರೆ. ಇದರಲ್ಲಿ ಬಹುತೇಕ ಹುದ್ದೆಗಳು ಬೆಂಗಳೂರಿನಲ್ಲಿವೆ. ಬಿಪಿಒ, ಐಟಿಇಎಸ್ ಕ್ಷೇತ್ರವು 2 ಲಕ್ಷಕ್ಕಿಂತ ಹೆಚ್ಚಿನ ಜನರಿಗೆ ನೇರ ಉದ್ಯೋಗಗಳನ್ನು ಒದಗಿಸಿದೆ.
ಕೈಗಾರಿಕೆಗಳನ್ನು ರಾಜ್ಯದ ಎಲ್ಲಾ ಭಾಗಗಳಲ್ಲಿ ಸ್ಥಾಪಿಸಲು ಸರ್ಕಾರವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕೈಗಾರಿಕೆಗಳು ಎಲ್ಲಾ ಕಡೆಗಳಲ್ಲಿ ಸ್ಥಾಪನೆಯಾದಾಗ ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ. ಈ ಅಂಶವನ್ನು ಗಮನದಲ್ಲಿರಿಸಿ ರಾಜ್ಯ ಸರ್ಕಾರವು ಒಂದು ಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಹೊರಗುತ್ತಿಗೆ ಆಧಾರಿತ ಸೇವೆಗಳ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆಯನ್ನು ರೂಪಿಸಿದೆ. ಇಂತಹ ಸ್ಥಳಗಳಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಉದ್ದಿಮೆದಾರರಿಗೆ ಈ ಕೆಳಕಂಡಂತೆ ಆರ್ಥಿಕ ನೆರವನ್ನು ನೀಡಲಾಗುವುದು:
ಅನಾವರ್ತ ಆರ್ಥಿಕ ಬೆಂಬಲ
ಪ್ರತಿ 100 ಆಸನದ ಬಿಪಿಒ ಘಟಕಗಳಿಗೆ 20 ಲಕ್ಷ ರುಪಾಯಿವರೆಗೆ ಬಂಡವಾಳ ಹೂಡಿಕೆ ಸಹಾಯಧನ ಮಾನವ ಶಕ್ತಿ ತರಬೇತಿಗಾಗಿ ಪ್ರತಿ ಉದ್ಯೋಗಿಗೆ 10 ಸಾವಿರ ರುಪಾಯಿ ಆರ್ಥಿಕ ಬೆಂಬಲ.
ಆವರ್ತ ಆರ್ಥಿಕ ಬೆಂಬಲ
ಕಟ್ಟಡ ಬಾಡಿಗೆಗಳು ಮತ್ತು ಅಂತರ್ಜಾಲ ಜೋಡಣೆಯ ವೆಚ್ಚವನ್ನು ಭರಿಸಲು ಪ್ರತಿ ಉದ್ಯೋಗಿಗೆ ಸಹಾಯಧನವಾಗಿ 5 ಸಾವಿರ ರುಪಾಯಿ ಆರ್ಥಿಕ ಬೆಂಬಲ. ಈ ಯೋಜನೆಯಡಿ ಕನಿಷ್ಠ 100 ಆಸನಗಳ ಕೇಂದ್ರವನ್ನು ಸ್ಥಾಪಿಸಲು ಅವಕಾಶವಿದ್ದು, ನಂತರ 100ರ ಅಂಶಗಳಂತೆ ಹೆಚ್ಚಿನ ಆಸನಗಳಿಗೆ ಮೇಲಿನಂತೆ ಆರ್ಥಿಕ ಬೆಂಬಲವನ್ನು ನೀಡಲು ಯೋಜನೆಯಲ್ಲಿ ಕಲ್ಪಿಸಲಾಗಿದೆ.
ಯೋಜನೆಯಡಿ ಉದ್ದಿಮೆದಾರರನ್ನು ಗುರುತಿಸಲು ಬಿಪಿಒ ಕ್ಷೇತ್ರದ ಗಣ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದ್ದು, ಪಾರದರ್ಶಕ ವಿಧಾನದಲ್ಲಿ ಸಂದರ್ಶನದ ಮೂಲಕ ಅರ್ಹ ಉದ್ದಿಮೆದಾರರಿಗೆ ಕೇಂದ್ರಗಳನ್ನು ಸ್ಥಾಪಿಸಲು ಅವಕಾಶ ನೀಡಲಾಗುತ್ತದೆ.
ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ರಾಜ್ಯದ ಪ್ರಥಮ ಗ್ರಾಮೀಣ ಹೊರಗುತ್ತಿಗೆ ಸೇವೆಗಳ ಕೇಂದ್ರವನ್ನು ಪ್ರಾರಂಭಿಸುತ್ತಿದ್ದು, ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ. 17-08-09 ರಂದು ಹಮ್ಮಿಕೊಳ್ಳಲಾಗಿದೆ.
ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಉನ್ನತ ಮಟ್ಟದ ತಂತ್ರಾಂಶ ಜ್ಞಾನವುಳ್ಳ ಪರಿಣಿತರು ಇಲ್ದದಿದ್ದರೂ ಇರುವ ವಿದ್ಯಾವಂತರಿಗೆ ಉದ್ಯೋಗಾವಕಾಶಗಳನ್ನು ನೀಡಬಹುದೆಂಬ ಅಂಶವನ್ನು ಮನದಲ್ಲಿರಿಸಿ ಈ ಯೋಜನೆಯನ್ನು ಸರ್ಕಾರವು ರೂಪಿಸಿದೆ. ಕಂಪ್ಯೂಟರ್ಗಳ ಕನಿಷ್ಠ ಜ್ಞಾನ ಹೊಂದಿರುವರು ಸಹ ಈ ಯೋಜನೆಯಡಿ ಉದ್ಯೋಗವನ್ನು ಪಡೆಯಬಹುದಾಗಿದೆ. ಮುಂದಿನೆ ಐದು ವರ್ಷಗಳಲ್ಲಿ ಸುಮಾರು ಒಂದು ಲಕ್ಷ ಹುದ್ದೆಗಳನ್ನು ಈ ಯೋಜನೆಯಡಿ ಸೃಷ್ಟಿಸುವುದು ಸರ್ಕಾರದ ಗುರಿಯಾಗಿದೆ.
(ದಟ್ಸ್ ಕನ್ನಡ ವಾರ್ತೆ)