ಈದ್ಗಾ ವಿವಾದ : ಅಂಜುಮನ್ ಗೆ ಹಿನ್ನಡೆ
ನವದೆಹಲಿ, ಆ. 7 : ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಅಂಜುಮನ್ ಇಸ್ಲಾಂ ಸಂಸ್ಥೆಗೆ ಸೂಚಿಸಿದ್ದು, ಅಕ್ಟೋಬರ್ 6 ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಪ್ರಕರಣದ ಬಗ್ಗೆ ಖಾರವಾಗಿ ಟೀಕೆ ವ್ಯಕ್ತಪಡಿಸಿದ ನ್ಯಾಯಾಲಯ, ದಾಖಲೆಗಳು ನಿಮ್ಮ ಪರವಾಗಿಲ್ಲ, ಇಲ್ಲವಾದಲ್ಲಿ ಕಾನೂನಿನಂತೆ ತೀರ್ಪು ನೀಡುವುದಾಗಿ ಅಂಜುಮನ್ ಸಂಸ್ಥೆಗೆ ತಿಳಿಸಿದ್ದರಿಂದ ಅಂಜುಮಾನ್ ಇಸ್ಲಾಂ ಸಂಸ್ಥೆಗೆ ಭಾರಿ ಹಿನ್ನಡೆ ಉಂಟಾಗಿದೆ.
ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ನ ನ್ಯಾಯಾಧೀಶರಾದ ದಲವೀರ್ ಭಂಡಾರಿ ಹಾಗು ಮುಕುಂದ್ ಶರ್ಮಾ ಅವರನ್ನು ಒಳಗೊಂಡ ವಿಭಾಗಿಯ ಪೀಠ, ಈದ್ಗಾ ಮೈದಾನ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಸ್ವತ್ತು. ಲೈಸೆನ್ಸ್ ನೀಡುವುದು ಮತ್ತು ರದ್ದು ಮಾಡುವುದು ಪಾಲಿಕೆಗೆ ಸಂಬಂಧಪಟ್ಟ ವಿಚಾರ. ದಾಖಲೆಗಳು ನಿಮ್ಮ ಪರವಾಗಿಲ್ಲ. ಎಲ್ಲಾ ನ್ಯಾಯಾಲಯಗಳು ನಿಮ್ಮ ವಿರುದ್ದ ತೀರ್ಪು ನೀಡಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.
ಈ ಸ್ಥಳದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಶಾಲೆ, ಆಸ್ಪತ್ರೆ ಅಥವಾ ಆಟದ ಮೈದಾನ ನಿರ್ಮಿಸಿ. ಮುಸ್ಲಿಮರು ವರ್ಷದಲ್ಲಿ ಎರಡು ಬಾರಿ ಈ ಸ್ಥಳವನ್ನು ನಮಾಜಿಗೆ ಬಳಸಲಿ. ಆದರೆ ಮೈದಾನದ ಮಾಲೀಕತ್ವ ಪಾಲಿಕೆಯದ್ದೇ ಎಂದು ಸ್ಪಷ್ಟಪಡಿಸಿದೆ.
(ದಟ್ಸ್ ಕನ್ನಡ ವಾರ್ತೆ)