ಯೋಗೀಶ್ವರ್ ಹೇಳೋದೆಲ್ಲಾ ಬುರುಡೆ : ಎಚ್ಡಿಕೆ
ಚನ್ನಪಟ್ಟಣ ಕ್ಷೇತ್ರದ ಪುರಾಣ ಪ್ರಸಿದ್ದ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಂತರ ಕ್ಷೇತ್ರದಾದ್ಯಾಂತ ಅಭ್ಯರ್ಥಿ ಎಂ.ಸಿ.ಅಶ್ವಥ್ ಪರ ಬಿರುಸಿನ ಪ್ರಚಾರ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದರು ಕುಮಾರಸ್ವಾಮಿಯವರು, ಮೊದಲಿನಿಂದಲೂ ಜೆಡಿಎಸ್ ಪರವಾದ ಒಲವನ್ನ ಹೊಂದಿರುವ ಚನ್ನಪಟ್ಟಣ ಕ್ಷೇತ್ರದ ಜನತೆ ಈ ಬಾರಿಯೂ ಕ್ಷೇತ್ರದ ಕಾರ್ಯಕರ್ತರ ಸಂಘಟಿತ ಹೋರಾಟ ಮತ್ತು ಮತದಾರರ ಆಶೀರ್ವಾದದಿಂದ ಜೆಡಿಎಸ್ ಗೆಲುವು ಸಾಧಿಸುತ್ತದೆ. ಮೂರು ಬಾರಿ ಆಯ್ಕೆಯಾಗಿದ್ದ ಜನಪ್ರತಿನಿಧಿಯ ನಿರ್ಲಕ್ಷ್ಯ ಮನೋಭಾವದಿಂದ ಚನ್ನಪಟ್ಟಣ ಕ್ಷೇತ್ರ ಹೆಚ್ಚು ಅಭಿವೃದ್ದಿಗೊಳ್ಳಲು ಸಾಧ್ಯವಾಗಿಲ್ಲ. ಆದರೆ ಜೆಡಿಎಸ್ ಗೆಲುವು ಸಾಧಿಸಿದ ನಂತರ ಕ್ಷೇತ್ರದಲ್ಲಿ ಹೊಸಬದಲಾವಣೆಯಾಗಲಿದೆ ಎಂದು ಕುಮಾರಸ್ವಾಮಿ ವಿಶ್ವಾಸವ್ಯಕ್ತಪಡಿಸಿದರು.
ಚನ್ನಪಟ್ಟಣ ಕ್ಷೇತ್ರದ ಅಭಿವೃದ್ದಿಗೆ ನನ್ನ ಮತ್ತು ದೇವೇಗೌಡರ ಆಡಳಿತಾವಧಿಯಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದ ಹಲವಾರು ಯೋಜನೆಗಳನ್ನ ರೂಪಿಸಲಾಗಿತ್ತು. ಆದರೆ ಕ್ಷೇತ್ರದ ಅಭಿವೃದ್ದಿಗೆ ಕುಮಾರಸ್ವಾಮಿ ಸಹಕಾರ ನೀಡಲಿಲ್ಲವೆಂದು ಯೋಗೀಶ್ವರ್ ಬುರುಡೆ ಬಿಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಭರವಸೆಗಳ ಮಹಾಪೂರ ಹರಿಸುವ ಬಿಜೆಪಿಯಿಂದ ತಾಲ್ಲೂಕಿನ ಅಭಿವೃದ್ದಿ ಸಾಧ್ಯವಿಲ್ಲ. ಶಿಂಶಾದಿಂದ ನೀರು ತರಲು 96 ಕೋಟಿ ರು. ವ್ಯಯಿಸುತ್ತಿರುವ ಸರ್ಕಾರದ ನಿರ್ಧಾರ ಅಪ್ರಸ್ತುತವಾಗಿದೆ ಮತ್ತು ಭದ್ರಾಮೇಲ್ಧಂಡೆ ಯೋಜನೆ ಅನುಷ್ಠಾನಗೊಳಿಸುತ್ತೇವೆಂದು ಹೇಳಿ ನಯಾಪೈಸೆ ಬಿಡುಗಡೆ ಮಾಡದೇ ಸರ್ಕಾರ ಬೂಟಾಟಿಕೆ ರಾಜಕೀಯ ಮಾಡುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಚನ್ನಪಟ್ಟಣ ಕ್ಷೇತ್ರದ ಪೌಳಿದೊಡ್ಡಿ, ವಂದಾಡಗುಪ್ಪೆ, ಸುಣ್ಣಘಟ್ಟ, ಹೊಂಗನೂರು, ಕೋಡಂಬಳ್ಳಿ ಮತ್ತಿತರ ಹಳ್ಳಿಗಳಲ್ಲಿ ಕುಮಾರಸ್ವಾಮಿಯವರು ಅಭ್ಯರ್ಥಿ ಎಂ.ಸಿ.ಅಶ್ವಥ್ ಪರ ಬಿರುಸಿನ ಪ್ರಚಾರ ನಡೆಸಿದರು. ಪ್ರತಿಹಳ್ಳಿಗಳಲ್ಲೂ ಕುಮಾರಸ್ವಾಮಿಯವರಿಗೆ ಹೆಂಗಳೆಯರು ಆರತಿ ಬೆಳಗಿ ತಿಲಕವಿಟ್ಟು ನೆಚ್ಚಿನ ನಾಯಕನನ್ನ ಸಂಭ್ರಮದಿಂದ ಸ್ವಾಗತಿಸಿದರು. ನಾಳೆಯೂ ಕೂಡ ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರು ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಪ್ರಚಾರದ ಸಂದರ್ಭದಲ್ಲಿ ಬಮೂಲ್ ನಿರ್ದೇಶಕ ಲಿಂಗೇಶ್ಕುಮಾರ್, ತಾ.ಜೆಡಿಎಸ್ ಅಧ್ಯಕ್ಷ ಪುಟ್ಟಸಿದ್ದೇಗೌಡ, ಬೋರ್ವೆಲ್ ರಾಮಚಂದ್ರು, ಸಿಂಗರಾಜಿಪುರದ ರಾಜಣ್ಣ, ಅರಳಾಳುಸಂದ್ರ ಶಿವಪ್ಪ, ಈಶ್ವರಯ್ಯ, ಉಮಾಶಂಕರ್, ಮತ್ತಿತರ ಮುಖಂಡರುಗಳು ಹಾಜರಿದ್ದರು.