ಸಂಸತ್ತಿನಲ್ಲಿ ಉಗ್ರ ಸಯೀದ್ ಗದ್ದಲ
ಪಾಕಿಸ್ತಾನದ ಸುಪ್ರಿಂಕೋರ್ಟ್ ಮುಂಬೈನ ದಾಳಿಕೋರ ಸಯೀದ್ ವಿಚಾರಣೆ ಅನಿರ್ಧಿಷ್ಟಾವಧಿಗೆ ಮುಂದೂಡಿರುವ ಕುರಿತು ಸಮಾಜವಾದಿ ಮುಖಂಡ ಮುಲಾಯಂ ಸಿಂಗ್ ಯಾದವ್ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು. ಇದನ್ನು ಧ್ವನಿಗೂಡಿಸಿದ ಬಿಜೆಪಿ, ರಾಷ್ಟ್ರೀಯ ಜನತಾದಳ, ಶಿವಸೇನೆ, ಜೆಡಿಯು ಪಕ್ಷಗಳು ಸರಕಾರ ಕ್ರಮಕ್ಕೆ ತೀವ್ರ ಅಸಮಾಧಾನಗೊಂಡು ಗದ್ದಲ ಆರಂಭಿಸಿದರು.
ಪಾಕ್ ಸುಪ್ರಿಂಕೋರ್ಟ್ ತೆಗೆದುಕೊಂಡಿರುವ ನಿರ್ಧಾರ ಭಾರತದ ಸಾರ್ವಭೌಮತೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿದೆ. ಈ ಬಗ್ಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಸೂಕ್ತ ವಿವರಣೆ ನೀಡಬೇಕು ಎಂದು ಪಟ್ಟುಹಿಡಿದರು. ಈ ಸಮಯದಲ್ಲಿ ಗದ್ದಲ ಉಂಟಾಗಿದ್ದರಿಂದ ಅರ್ಧ ಗಂಟೆ ಸದನದ ಕಲಾಪವನ್ನು ಮುಂದೂಡಬೇಕಾಯಿತು.
ನಂತರ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಮುಂಬೈ ಭಯೋತ್ಪಾದನೆಯಲ್ಲಿ ಸಯೀದ್ ಕೈವಾಡ ಇರುವುದು ಸಾಬೀತಾಗಿದೆ. ಸರಕಾರ ಪಾಕಿಸ್ತಾನಕ್ಕೆ ಎಲ್ಲ ಸಾಕ್ಷ್ಯಾಧಾರಗಳನ್ನು ನೀಡಿದೆ ಎಂದು ಹೇಳಿಕೊಂಡಿದೆ. ಹಾಗಿದ್ದರೆ, ಪಾಕ್ ಸರಕಾರ ನ್ಯಾಯಾಲಯಕ್ಕೆ ಏಕೆ ಸಾಕ್ಷ್ಯಾಧಾರಗಳನ್ನು ಒಪ್ಪಿಸಿಲ್ಲ. ಇದೊಂದು ಗಂಭೀರ ವಿಷಯವಾಗಿದೆ. ಆದರೆ, ಪ್ರಧಾನಮಂತ್ರಿ, ವಿದೇಶಾಂಗ ಮಂತ್ರಿಗಳು ದಿನಕ್ಕೊಂದು ಹೇಳಿಕೆ ನೀಡಿ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
(ಏಜನ್ಸೀಸ್)