ಸಯೀದ್ ವಿಚಾರಣೆ ಅನಿರ್ಧಷ್ಟಾವಧಿ ಮುಂದೂಡಿಕೆ
ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಸರಕಾರಕ್ಕೆ ಹಫೀಜ್ ಮಹ್ಮದ್ ಸಯೀದ್ ವಿರುದ್ಧ ಅಗತ್ಯ ಸಾಕ್ಷ್ಯಾಧಾರಗಳು ಕೊರತೆ ಇದೆ ಎಂದು ಪಾಕಿಸ್ತಾನ ಸರಕಾರದ ಹಿರಿಯ ಅಧಿಕಾರಿಗಳು ಪಾಕ್ ಸುಪ್ರಿಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ. ಪಾಕಿಸ್ತಾನದ ಆತಂರಿಕ ವಲಯದ ಸಚಿವ ರಹೆಮಾನ್ ಮಲೀಕ್ ಕೂಡಾ ಮುಂಬೈ ದಾಳಿಗೆ ಸಂಬಂಧಿಸಿದಂತೆ ಸಯೀದ್ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಈ ಹಿಂದೆಯೇ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಯೀದ್ ಪರ ವಕೀಲ ಎಕೆ ದೋಗರ್, ಇದೀಗ ನನ್ನ ಕಕ್ಷಿದಾರ ಸ್ವತಂತ್ರ ಹಕ್ಕಿ ಎಂದಿದ್ದಾರೆ. ಮುಂಬೈ ಭಯೋತ್ಪಾದನೆಯಲ್ಲಿ ಜಮಾತೆ ಉದ್ ದವಾ ಹಾಗೂ ಲಷ್ಕರ್ ಇ ತೊಯ್ಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಮೊಹ್ಮದ್ ಸಯೀದ್ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಆದ್ದರಿಂದ ಅವರನ್ನು ಬಂಧಿಸಿ ಶಿಕ್ಷೆ ನೀಡಬೇಕು ಎಂದು ಭಾರತ ಅನೇಕ ಬಾರಿ ಆಗ್ರಹಿಸಿತ್ತು.
ಭಾರತ ಹಾಗೂ ಜಾಗತಿಕ ಮಟ್ಟದಿಂದ ಬಂದ ಒತ್ತಡದಿಂದ ಸಯೀದ್ ಅವರನ್ನು ಪಾಕ್ ಸರಕಾರ ಗೃಹ ಬಂಧನದಲ್ಲಿರಿಸಿತ್ತು. ನಂತರ ಅವರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಪಾಕ್ ಸರಕಾರ ಹೇಳಿತ್ತು. ಸೂಕ್ತ ಸಾಕ್ಷ್ಯಾದಾರಗಳನ್ನು ಪಾಕ್ ಸರಕಾರ ಒದಗಿಸುವಲ್ಲಿ ವಿಫಲವಾಗಿದ್ದರಿಂದ ಇಂದು ನ್ಯಾಯಾಲಯದಿಂದ ಹಫೀಜ್ ಬಿಡುಗಡೆಗೊಂಡಿದ್ದಾರೆ. ಮುಂಬೈ ದಾಳಿಗೆ ಸಂಬಂಧಿಸಿದಂತೆ ಭಾರತ ಎರಡು ಭಾರಿ ಪ್ರಮುಖ ಸಾಕ್ಷ್ಯಾಧಾರಗಳನ್ನು ಪಾಕಿಸ್ತಾನಕ್ಕೆ ನೀಡಿದೆ ಎನ್ನುವುದು ವಿಶೇಷವಾಗಿದೆ.
(ಏಜನ್ಸೀಸ್)