ಪಿಎಫ್ಐ, ಕೆಎಫ್ ಡಿ ನಿಷೇಧಕ್ಕೆ ಬಿಜೆಪಿ ಆಗ್ರಹ
ಬೆಂಗಳೂರು, ಆ. 3 : ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕೋಮುಗಲಭೆ ಬಗ್ಗೆ ಪರಾಮರ್ಶೆ ನಡೆಸಿದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಕೆಎಫ್ ಡಿ, ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸುವಂತೆ ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿದೆ.
ಮೈಸೂರಿ ಗಲಭೆ ಹಿಂದೆ ಕೆಎಫ್ ಡಿ (ಕರ್ನಾಟಕ ಡಿಗ್ನಿಟಿ ಫೋರಂ) ಹಾಗೂ ಪಿಎಫ್ ಐ ಗಳ (ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾ) ಕೈವಾಡವಿರುವುದು ಸ್ಪಷ್ಟವಾಗಿದೆ. ಉಗ್ರ ಸಂಘಟನೆ ಸಿಮಿಯ ಮತ್ತೊಂದು ಅವತಾರವಾಗಿ ಆಸ್ತಿತ್ವಕ್ಕೆ ಬಂದಿರುವ ಈ ಎರಡೂ ಸಂಘಟನೆಗಳು ದೇಶ ವಿದ್ರೋಹಿ ಚಟುವಟಿಕೆಗಳಲ್ಲಿ ನಿರತವಾಗಿವೆ. ಇವು ರಾಜ್ಯದ ಸುರಕ್ಷತೆ ದೃಷ್ಟಿಯಿಂದ ಅಪಾಯಕಾರಿ. ಆದ್ದರಿಂದ ಇವುಗಳನ್ನು ನಿಷೇಧಿಸಲು ಸರಕಾರ ಮುಂದಾಗಬೇಕು ಎಂದು ಕಾರ್ಯಕಾರಿಣಿ ಆಗ್ರಹಿಸಿದೆ.
ಸಭೆಯ ನಿರ್ಣಯಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ ಶಾಸಕ ಸಿ ಟಿ ರವಿ, ಕಗ್ಗಂಟಾಗಿರುವ ಚಿಕ್ಕಮಗಳೂರು ಜಿಲ್ಲೆಯ ದತ್ತ ಪೀಠದ ಪೂಜಾ ವಿಧಾನ ಮತ್ತು ಮಾಲೀಕತ್ವದ ವಿವಾದವನ್ನು ಶಾಶ್ವತವಾಗಿ ಪರಿಹರಿಸಲು ಸಕಾರಾತ್ಮಕ ಕ್ರಮ ಕೈಗೊಳ್ಳುವಂತೆ ಸಭೆ ಸರ್ಕಾರವನ್ನು ಆಗ್ರಹಿಸಿತು ಎಂದರು.
(ದಟ್ಸ್ ಕನ್ನಡ ವಾರ್ತೆ)