ರಾಮನಗರ : ಎಚ್ಐವಿ ಪೀಡಿತರ ಸಹಾಯಕ್ಕೆ 'ಸುರಕ್ಷಾ'
ಪದವೀಧರರಾಗಿರುವ ಹವಾರು ಮಂದಿ ಹಿಜಡಾ(ಲೈಂಗಿಕ ಅಲ್ಪಸಂಖ್ಯಾತ)ಗಳು ಲೈಂಗಿಕ ಸುರಕ್ಷತೆ ಮತ್ತು ಎಚ್.ಐ.ವಿ ಸೋಂಕಿನ ಬಗ್ಗೆ ಅರಿವು ಮೂಡಿಸುವ ಸುರಕ್ಷಾ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎಚ್ಐವಿ ಸೋಂಕು ಕುರಿತಂತೆ ಜಾಗೃತಿಯ ಕೊರತೆ, ಸಮಾಜದ ದೌರ್ಜನ್ಯ ಮತ್ತು ಕೀಳುಭಾವನೆಯಿಂದ ಲೈಂಗಿಕ ಅಲ್ಪಸಂಖ್ಯಾತರು ಶೋಷಣೆಗೊಳಗಾಗುತ್ತಿದ್ದಾರೆ. ಆದ್ದರಿಂದ ಪಠ್ಯ ಪುಸ್ತಕಗಳಲ್ಲಿ ಲೈಂಗಿಕ ಶಿಕ್ಷಣದ ವಿಷಯವನ್ನು ಅಳವಡಿಸಬೇಕು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಇರುವ ತಪ್ಪು ತಿಳಿವಳಿಕೆಗಳನ್ನು ಹೋಗಲಾಡಿಸಿ ಸಮಾಜದಲ್ಲಿ ಮನುಷ್ಯರಂತೆ ಬಾಳುಲು ಅವಕಾಶ ಮಾಡಿಕೊಡಬೇಕು ಎಂಬುದು ಲೈಂಗಿಕ ಅಲ್ಪಸಂಖ್ಯಾತರ ಮನವಿಯಾಗಿದೆ.
ಲೈಂಗಿಕ ವೃತ್ತಿಗೆ ಮಹಿಳೆಯರು ಬರಲು ಕೌಟುಂಬಿಕ ಸಮಸ್ಯೆಯೇ ಮುಖ್ಯ ಕಾರಣವಾಗಿರುತ್ತದೆ. ಕೇವಲ ದೈಹಿಕ ಸುಖಕ್ಕಾಗಿ ಮಹಿಳೆಯರು ಲೈಂಗಿಕ ವೃತ್ತಿಯ ಹಾದಿ ಹಿಡಿಯುವುದಿಲ್ಲ. ಎದೆಯೆತ್ತರ ಬೆಳೆದ ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸಲು ವಿದ್ಯಾಭ್ಯಾಸದ ಅವಶ್ಯಕತೆ ಇರುವುದರಿಂದ ಕುಟುಂಬದ ಸಹಕಾರವಿಲ್ಲದ ಮಹಿಳೆಯರು ಆಕಸ್ಮಿಕವಾಗಿ ಈ ಹಾದಿ ಹಿಡಿಯಬೇಕಾಗುತ್ತದೆ. ಸಪ್ತಪದಿ ತುಳಿದ ಗಂಡಂದಿರು ಮತ್ತು ಕುಟುಂಬದವರೇ ಕೆಲವೊಮ್ಮೆ ಲೈಂಗಿಕ ವೃತ್ತಿಯೆಂಬ ಪಾಪದ ಕೂಪಕ್ಕೆ ತಳ್ಳುತ್ತಾರೆ. ಕೆಲವೊಮ್ಮೆ ಸಂದರ್ಭದ ಒತ್ತಡಕ್ಕೊಳಗಾಗಿ ವೇಶ್ಯಾವಾಟಿಕೆಯ ಧಂಧೆಗೆ ಬೀಳುತ್ತಿದ್ದಾರೆ.
ಎಚ್.ಐ.ವಿಯಿಂದ ಮುಕ್ತರಾಗಲು ಎಲ್ಲಾ ಸುರಕ್ಷತಾ ಕ್ರಮಗಳನ್ನ ಲೈಂಗಿಕ ವೃತ್ತಿ ಮಹಿಳೆಯರು ಪಾಲಿಸುತ್ತಾರೆ. ಆದರೆ ಕೆಲವರು ಮಾಡುವ ತಪ್ಪಿನಿಂದ ಎಚ್.ಐ.ವಿ ಸೋಂಕು ಹರಡುತ್ತಿದೆ ಎಂಬುದು ಲೈಂಗಿಕ ಕಾರ್ಯಕರ್ತರ ಅಭಿಪ್ರಾಯ.
ಇಡೀ ಕುಟುಂಬಕ್ಕೆ ಎಚ್.ಐ.ವಿ. ಸೋಂಕು ತಗುಲಿದ್ದರಿಂದ ಅಕ್ಕಪಕ್ಕದವರು ಮತ್ತು ಗ್ರಾಮದವರು ಅಸ್ಪೃಶ್ಯ ಭಾವನೆಯಿಂದ ಬದುಕು ನಡೆಸಲು ಸಾಧ್ಯವಾಗದ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಸೋಂಕು ತಗುಲಿರುವ ಮಕ್ಕಳನ್ನು ಶಾಲೆಗಳಿಗೆ ಸೇರಿಸಿಕೊಳ್ಳುತ್ತಿಲ್ಲ. ಇದರಿಂದಾಗಿ ಸೋಂಕಿಗೀಡಾದವರು ವಿಚಿತ್ರ ಹಿಂಸೆ ಅನುಭವಿಸುತ್ತಿದ್ದಾರೆ. ಬದುಕು ಸಾಗಿಸುವುದೇ ಕಷ್ಟವಾಗಿರುವ ಸಂದರ್ಭದಲ್ಲಿ 'ಸಾಧನೆ' ಮತ್ತು 'ಸುರಕ್ಷಾ' ಸಂಘಟನೆಗಳು ಸೋಂಕಿಗೀಡಾದವರು ಮಾನಸಿಕವಾಗಿ ಸಧೃಡರಾಗಲು ಸಹಾಯಹಸ್ತ ಚಾಚುತ್ತಿವೆ.