ಸರಬ್ ಜೋತ್ ಸಿಂಗ್ ಬಂಧನಕ್ಕೆ ಬೂಟಾ ಆಕ್ರೋಶ
ಲಂಚ ಪ್ರಕರಣದಲ್ಲಿ ನನ್ನ ಮಗ ಸರಬ್ ಜೋತ್ ಸಿಂಗ್ ನನ್ನು ಸಿಲುಕಿಸಲಾಗಿದೆ. ಇದರಲ್ಲಿ ಮಹಾರಾಷ್ಟ್ರ ರಾಜಕೀಯ ಪಕ್ಷವೊಂದರ ಕೈವಾಡವಿರುವುದು ಸ್ಪಷ್ಟವಾಗಿದೆ ಎಂದು ಸಿಂಗ್ ಆರೋಪಿಸಿದ್ದಾರೆ. ಪರಿಶಿಷ್ಟ ಜಾತಿ ಜನಾಂಗದ ರಾಷ್ಟ್ರೀಯ ಆಯೋಗದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಮುಚ್ಚಿಹಾಕಲು ನಾಸಿಕ್ ಮೂಲದ ರಾಮರಾಜ್ ಎಂಬ ಗುತ್ತಿಗೆದಾರರಿಂದ ಒಂದು ಕೋಟಿ ರುಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಶುದ್ಧ ಸುಳ್ಳು. ಇದೊಂದು ವ್ಯವಸ್ಥಿತವಾದ ಪಿತೂರಿ ಎಂದು ಕಿಡಿಕಾರಿದರು.
ಕೇಂದ್ರದ ಮಾಜಿ ಸಚಿವ ಬೂಟಾ ಸಿಂಗ್ ಅವರ ಮಗ ಸರಬ್ ಜೋತ್ ಸಿಂಗ್ ಅಲಿಯಾಸ್ ಸ್ವೀಟಿ ಸಿಂಗ್ ಅವರನ್ನು ಸಿಬಿಐ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದರು. ಸರಬ್ ಜೋತ್ ಸಿಂಗ್ ಅವರನ್ನು ದೆಹಲಿಯಲ್ಲಿ ಬಂಧಿಸಿರುವ ಸಿಬಿಐ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಮುಂಬೈಗೆ ತನಿಖೆಗಾಗಿ ಕರೆತಂದಿದ್ದಾರೆ. ಪರಿಶಿಷ್ಟ ಜಾತಿ ಜನಾಂಗದ ರಾಷ್ಟ್ರೀಯ ಆಯೋಗದಲ್ಲಿ ಗುತ್ತಿಗೆದಾರರ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ತಮ್ಮ ತಂದೆ ಆಯೋಗದ ಅಧ್ಯಕ್ಷರಾಗಿರುವುದರಿಂದ ಪ್ರಕರಣವನ್ನು ಮುಚ್ಚಿ ಹಾಕಿಸುವ ಭರವಸೆ ನೀಡಿ ಸರಬ್ ಜೋತ್ ಸಿಂಗ್ ಒಂದು ಕೋಟಿ ರುಪಾಯಿ ಲಂಚ ಕೇಳಿದ್ದರು ಎಂದು ಸಿಬಿಐ ಮೂಲಗಳು ತಿಳಿಸಿವೆ.
(ಏಜನ್ಸೀಸ್)