ಪಾಪಿ ಪಾಕ್ ಮಾತು ಸಾಕು : ಚಿದಂಬರಂ
ಮುಂಬೈ ದಾಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಜಮಾತೆ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಅವರನ್ನು ಬಂಧಿಸಲು ಆಗುವುದಿಲ್ಲ ಎಂದು ಪಾಕಿಸ್ತಾನ ನೀಡಿರುವ ಹೇಳಿಕೆಗೆ ಚಿದಂಬರಂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮುಂಬೈನ ದಾಳಿಗೆ ಸಂಬಂಧಿಸಿದಂತೆ ಸಾಕಷ್ಟು ಪುರಾವೆಗಳನ್ನು ಈಗಾಗಲೇ ನೀಡಲಾಗಿದೆ. ಇದೀಗ ಉಳಿದಿರುವುದು ಪಾಕಿಸ್ತಾನ ಕೆಲಸ ಎಂದು ಅವರು ಹೇಳಿದರು.
ಇತ್ತೀಚೆಗೆ ಜಿಯೋ ಟಿವಿಗೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ ಆಂತರಿಕ ಇಲಾಖೆ ಸಚಿವ ರೆಹಮಾನ್ ಮಲಿಕ್, ಕಳೆದ ವರ್ಷ ಮುಂಬೈನಲ್ಲಿ ನಡೆದ ಭಯೋತ್ಪಾದನೆಯಲ್ಲಿ ಸಯೀದ್ ಅವರ ಕೈವಾಡವಿರುವ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಭಾರತ ಬರೀ ಆರೋಪ ಮಾಡಿದರೆ ಸಾಲದು, ಸಯೀದ್ ಭಾಗಿಯಾಗಿರುವ ಬಗ್ಗೆ ಅಗತ್ಯ ಸಾಕ್ಷ್ಯಾಧಾರಗಳನ್ನು ನೀಡಬೇಕು ಎಂದು ಮಲಿಕ್ ಆಗ್ರಹಿಸಿದ್ದರು.
ಉಗ್ರರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲು ಪಾಕಿಸ್ತಾನದ ಸರಕಾರ ಹಿಂಜರಿಯುವುದಿಲ್ಲ. ಆದರೆ, ಮುಂಬೈ ದಾಳಿಗೆ ಸಂಬಂಧಿಸಿದಂತೆ ಸೂಕ್ತ ಆಧಾರ ಒದಗಿಸದರೆ ಮಾತ್ರ ಮುಂದಿನ ಕ್ರಮ ಎಂದು ಅವರು ಸ್ಪಷ್ಟಪಡಿಸಿದ್ದರು. ಆದರೆ, ಬರೀ ಆರೋಪ ಮಾಡುವುದರಿಂದ ಏನನ್ನೂ ಸಾಧಿಸಲು ಅಸಾಧ್ಯ. ಸಾಕ್ಷ್ಯಾಧಾರಗಳಿಲ್ಲದೇ ಸಯೀದ್ ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಅವರು ಪುನರುಚ್ಚರಿಸಿದ್ದರು.
(ಏಜನ್ಸೀಸ್)