ಬಿಜೆಪಿಗೆ ಉಳಿಗಾಲವಿಲ್ಲ : ಮುತಾಲಿಕ್
ಮೈಸೂರಿನ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಎಂ ಕಾಮ್ಟೆ ಅವರು ಮುತಾಲಿಕ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿ 10 ಸಾವಿರ ಭದ್ರತಾ ಠೇವಣಿ ಇಟ್ಟಕೊಂಡು ಮುತಾಲಿಕ ಅವರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದ್ದಾರೆ. ಆರೋಪಿ ಮುತಾಲಿಕ ಅವರು ಕೋಮು ಗಲಭೆ ಸೇರಿ ಒಟ್ಟು 38 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಆರೋಪಿ ಜಾಮೀನು ಸಿಕ್ಕ ನಂತರ ತಲೆ ಮರೆಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಜಾಮೀನು ನೀಡಬಾರದು ಎಂದು ಸರಕಾರಿ ವಕೀಲ ಕಾಳಿಂಗಪ್ಪ ವಾದಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುತಾಲಿಕ ಪರ ವಕೀಲ ಸಿ ವಿ ಕೇಶವಮೂರ್ತಿ ಅವರು, ನನ್ನ ಕಕ್ಷಿದಾರನ ಮೇಲೆ 38 ಪ್ರಕರಣಗಳಿವೆ ನಿಜ. ಆದರೆ, ಅವರು ಅಪರಾಧಿಯಂತೂ ಅಲ್ಲವೇ ಅಲ್ಲ. ಆದ್ದರಿಂದ ನನ್ನ ಕಕ್ಷಿದಾರರಿಗೆ ಜಾಮೀನು ನೀಡಬೇಕು ಎಂದು ಪ್ರತಿವಾದ ಮಂಡಿಸಿದ್ದರು. ಇತ್ತೀಚೆಗೆ ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆದ ಕೋಮುಗಲಭೆಯ ಹಿನ್ನೆಲೆಯಲ್ಲಿ ಮುತಾಲಿಕ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಮೈಸೂರು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು.
ಬಿಡುಗಡೆಗೊಂಡ ನಂತರ ಬಿಜೆಪಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮುತಾಲಿಕ, ಅಧಿಕಾರದ ಆಸೆಗಾಗಿ ಬಿಜೆಪಿ ಹಿಂದುತ್ವವನ್ನು ಮರೆತಿದೆ. ಹಿಂದುತ್ವವನ್ನು ಮರೆತ ಬಿಜೆಪಿ ಕೇಂದ್ರದಲ್ಲಿ ಅನುಭವಿಸಿದ ಮುಖಭಂಗವನ್ನು ರಾಜ್ಯದಲ್ಲಿ ಅನುಭವಿಸುವ ದಿನ ದೂರವಿಲ್ಲ. ಹಿಂದೂ ಮುಖಂಡರಿಗೆ ಹೀಗೆ ಪದೆಪದೇ ಹಿಂಸೆ ನೀಡುವುದನ್ನು ಸಹಿಸಲು ಆಸಾಧ್ಯ ಎಂದು ಅವರು ಎಚ್ಚರಿಕೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)