ಎಲ್ಲ ಠೇವಣಿದಾರರಿಗೆ ಹಣ ವಾಪಸ್-ವಿನಿವಿಂಕ್
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ಶಾಸ್ತ್ರಿ ಬಿಡುಗಡೆಗೊಂಡು 48 ಗಂಟೆ ಕಳೆದಿರಬಹುದು. ಸೋಮವಾರ ಸಂಜೆ ಅವರು ಬಿಡುಗಡೆಗೊಂಡಿದ್ದು, ಮಂಗಳವಾರದ ಪ್ರಮುಖ ದೈನಿಕಗಳಲ್ಲಿ ಅವರ ಸಂದರ್ಶನ ಪ್ರಕಟವಾದವು. ಇನ್ನಷ್ಟು ಮುಂದುವರಿದ ಶಾಸ್ತ್ರಿ ನಾಡಿನ ಎರಡು ಪ್ರಮುಖ ವಾರ್ತಾ ವಾಹಿನಿಗಳಿಗೆ ನೇರ ಸಂದರ್ಶನ ನೀಡಿದರು.
ಸುಮಾರು 20,184 ಠೇವಣಿದಾರರ 203 ಕೋಟಿಗಳಿಗೆ ನಾಮ ಹಾಕಿದ ಆರೋಪಿ ಶಾಸ್ತ್ರಿ ಮೇಲೆ 43 ಪ್ರಕರಣಗಳಿವೆ. ಆದರೆ, ಮಂಗಳವಾರ ಸಂಜೆ ಟಿವಿ 9 ನಲ್ಲಿ ನೀಡಿದ ಸಂದರ್ಶನದಲ್ಲಿ (ನಾನು ನೋಡಿದ್ದು) ಮಾತನಾಡುವಾಗ ಶಾಸ್ತ್ರಿ ಮುಖದಲ್ಲಿ ಯಾವುದೇ ಅಂಜಿಕೆ ಕಾಣಲಿಲ್ಲ. ನಾನು ಜೈಲಿನಿಂದ ಬಿಡುಗಡೆಯಾಗಿದ್ದೆ ಠೇವಣಿದಾರರ ಹಣ ವಾಪಸ್ಸು ನೀಡಲು. ಸುಪ್ರಿಂಕೋರ್ಟ್ ನಲ್ಲಿ ಕೂಡಾ ಇದೇ ಪ್ರಮಾಣ ಪತ್ರ ನೀಡಿ ನಾನು ಜಾಮೀನಿನ ಮೇಲೆ ಹೊರಗೆ ಬಂದಿರುವೆ. ನನ್ನ ಮೊದಲ ಅಧ್ಯತೆ ಠೇವಣಿದಾರರ ಹಣ ಹಿಂದಿರುಗಿಸುವುದು. ಹಣ ಹಿಂದಿರುಗಿಸುವುದು ನೂರಕ್ಕೆ ನೂರರಷ್ಟು ಸತ್ಯ. ಹಣ ಕಳೆದುಕೊಂಡಿರುವವರ ನೋವು ನನಗೆ ಅರ್ಥವಾಗುತ್ತೆ. ಅವರ ನೋವನ್ನು ನೋಡಲು ನನ್ನ ಕೈಲೂ ಸಾಧ್ಯವಿಲ್ಲ. ಸಂಸ್ಥೆಗೆ ಹಣ ಹೂಡಿದ ಎಲ್ಲರಿಗೂ ಶೀಘ್ರದಲ್ಲಿ ಹಣ ಹಿಂದಿರುಗಿಸುವೆ. ನನಗೆ ಮನಶ್ಶಾಂತಿ ಬೇಕು. ನನ್ನ ಆತ್ಮ ಸಾಕ್ಷಿಗಾಗಿ ನಾನು ಕೆಲಸ ಮಾಡುವೆ. ಠೇವಣಿದಾರರ ಹಣ ಕೊಡಲೇಬೇಕು, ಕೊಟ್ಟೆಕೊಡುವೆ ಎಂದು ವಿನಿವಿಂಕ್ ಶಾಸ್ತ್ರಿ ಟಿವಿ 9 ವೇದಿಕೆ ಮೂಲಕ ಘೋಷಣೆ ಮಾಡಿದ್ದಾರೆ. ಇವರ ಜೊತೆಗೆ ಖ್ಯಾತ ನ್ಯಾಯವಾದಿ ಎಂ ಟಿ ನಾಣಯ್ಯ ಇದ್ದರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸಂದರ್ಶಕ ರಂಗನಾಥ ಭಾರದ್ವಾಜ ಶಾಸ್ತ್ರಿಗೆ ಕೆಲ ಸಮಯೋಚಿತ ಪ್ರಶ್ನೆಗಳನ್ನೇ ಕೇಳಿದರು.
ಸಾರ್ವಜನಿಕರಿಗೆ ಸೇರಿದ್ದ ಕೋಟ್ಯಂತರ ರುಪಾಯಿಗಳ ಅವ್ಯವಹಾರ ಮಾಡಿ ತಲೆ ಮರೆಸಿಕೊಂಡಿರುವವರು ಸಾಕಷ್ಟು ಮಂದಿ ಇದ್ದಾರೆ. ಕೆಲವರು ರಾಜಾರೋಷವಾಗಿ ನಮ್ಮೊಳಗೆ ತಿರುಗಾಡುತ್ತಿದ್ದಾರೆ, ಇನ್ನೂ ಕೆಲವರು ಜೈಲು ಪಾಲಾಗಿದ್ದಾರೆ. ಇನ್ನಷ್ಟು ಜನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಮೋಸ ಮಾಡಿದವರನ್ನು ಪೊಲೀಸರು ಬಂಧಿಸುವುದು. ನಾಲ್ಕಾರು ವರ್ಷ ಜೈಲಿನಲ್ಲಿಡುವುದು. ನಂತರ ಅವರು ಜಾಮೀನಿನ ಮೇಲೆ ಹೊರಗಡೆ ಬರುವುದು ಎಂದಿನಂತೆ ಸಾಮಾನ್ಯ ಜೀವನ ನಡೆಸುವುದು ಮಾಮೂಲಿಯಾಗಿದೆ. ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು.
ಆದರೆ, ಠೇವಣಿದಾರರ ಖಳನಾಯಕನಾಗಿದ್ದ ವಿನಿವಿಂಕ್ ಶಾಸ್ತ್ರಿ ಈ ವಿಷಯದಲ್ಲಿ ವಿಭಿನ್ನವಾಗಿ ಕಾಣತೊಡಗಿದ್ದಾರೆ. ನನಗೆ ದುಡ್ಡು ಮಾಡುವುದು ಸಾಕು. ಮನಸ್ಸಿಗೆ ಶಾಂತಿ. ನನ್ನ ಸಂಸ್ಥೆಯಲ್ಲಿ ಹಣ ಹೂಡಿದ ಎಲ್ಲ ಠೇವಣಿದಾರರಿಗೆ ಹಣ ಹಿಂತಿರುಗಿಸುವುದು ನನ್ನ ಏಕೈಕ ಕೆಲಸ ಎಂದಿದ್ದಾರೆ. ಶಾಸ್ತ್ರಿ ಪ್ರಚಂಡ ಬುದ್ಧಿವಂತ ಅನ್ನುವುದು ಈಗಾಗಲೇ ಸಾಬೀತಾಗಿದೆ. ದೇವಸ್ಥಾನವೊಂದರಲ್ಲಿ ಸಾಮಾನ್ಯ ಅರ್ಚಕರಾಗಿದ್ದ ಶ್ರೀನಿವಾಸಶಾಸ್ತ್ರಿ ವಿನಿವಿಂಕ್ ಎಂಬ ಸಂಸ್ಥೆ ಕಟ್ಟಿ ಬೆಳೆಸಿದ ರೀತಿ ಆಶ್ಚರ್ಯ ತರಿಸುತ್ತದೆ.
ವಿನಿವಿಂಕ್ ಶಾಸ್ತ್ರಿ ಅವರು ಮಾಡಿದ ಮೋಸಕ್ಕೆ ಸಮರ್ಥನೆಯಂತೂ ಖಂಡಿತ ಅಲ್ಲ. ಆದರೆ, ಅಮಾಯಕರ ರೊಕ್ಕ ತಿಂದು ಓಡಿ ಹೋದವರು ಯಾರೂ ಕೂಡಾ ರೊಕ್ಕ ಕೊಡುವೆ ಎಂದು ಬಂದು ಪತ್ರಿಕೆಗಳ ಹಾಗೂ ಟಿವಿಗಳ ಮೂಲಕ ಸಂದರ್ಶನ ನೀಡಿಲ್ಲ. ಇದು ಶಾಸ್ತ್ರಿಗೆ ಅನಿವಾರ್ಯವೋ, ಅತ್ಮಸಾಕ್ಷಿಯೋ ಗೊತ್ತಿಲ್ಲ. ಆದರೆ, ನಾನು ಬೆವರು ಹರಿಸಿ ಕೂಡಿಟ್ಟಿದ್ದ ರೊಕ್ಕ ಹಿಂದುರಿಗಿದರೆ ಅಷ್ಟು ಸಾಕು ಎನ್ನುತ್ತಾರೆ ವಿನಿವಿಂಕ್ ನಲ್ಲಿ ಠೇವಣಿ ಇಟ್ಟು ಕಕ್ಕಾಬಿಕ್ಕಿಯಾಗಿರುವ ಓರ್ವ ವಿವೃತ್ತ ಪ್ರಾಧ್ಯಾಪಕರು.
ಶಾಸ್ತ್ರಿ ಬಳಿ ರೊಕ್ಕ ಹಾಕಿದವರು ಸುಮಾರು 20,184 ಮಂದಿ. 203 ಕೋಟಿ ರುಪಾಯಿಗಳ ಅವ್ಯವಹಾರವಾಗಿದೆ. ನನ್ನಲ್ಲಿರುವ ಸಮಸ್ತ ಆಸ್ತಿಯನ್ನು ಮಾರಿ ಠೇವಣಿದಾರರ ರೊಕ್ಕ ಕೊಡುವೆ ಎಂದು ಶಾಸ್ತ್ರಿ ಹೇಳುತ್ತಾರೆ. ಅವರ ಜೊತೆಗೆ ಖ್ಯಾತ ವಕೀಲ ಎಂ ಟಿ ನಾಣಯ್ಯ ಕೂಡಾ ಕಾನೂನಿನ ಪ್ರಕಾರ ಇದು ಸಾಧ್ಯ ಎಂದು ಅತ್ಯಂತ ಹೆಚ್ಚು ಪ್ರಸಾರವುಳ್ಳ ಮಾಧ್ಯಮದ ಮೂಲಕ ಹೇಳಿಕೆ ನೀಡಿದ್ದಾರೆ. ಠೇವಣಿದಾರರಿಗೆ ಶಾಸ್ತ್ರಿ ಮೇಲೆ ನಂಬಿಕೆ ಹುಟ್ಟುವಂತ ಕೆಲಸವಂತೂ ಖಂಡಿತಾ ಹೌದು. ಶೇ. 10, 18, 25, 50, 60, 100, 120 ಬಡ್ಡಿ ಆಸೆಗೆ ಹಣ ಹೂಡಿ ಕೈಸುಟ್ಟುಕೊಂಡವರ ಮುಖ ಅರಳತೊಡಗಿದೆ. ಮೂಲಗಳು ಪ್ರಕಾರ ಹಣ ಹೂಡಿದವರಲ್ಲಿ ಹೆಚ್ಚು ಸರಕಾರಿ ನೌಕರರು, ಅದೂ ಪೊಲೀಸ್ ಇಲಾಖೆಯ ಮಂದಿ ಎನ್ನುವುದು ವಿಶೇಷವಾಗಿದೆ. ರೊಕ್ಕ ಕಳೆದುಕೊಂಡ 20 ಸಾವಿರಕ್ಕೂ ಅಧಿಕ ಮಂದಿಗೆ ಹಣ ವಾಪಸ್ಸು ಬರದೇ ಇದ್ದರೂ ಅರ್ಧದಷ್ಟಾದರೂ ಮಂದಿಗೆ ಹಾಕಿದ ಹಣ ಹಿಂದಿರುಗಿದರೆ ಠೇವಣಿದಾರರಿಗೆ ಲಾಭವಲ್ಲವೇ.