ರಾಮನಗರ : ಜೆಡಿಎಸ್ ನಿಂದ ಕೆ ರಾಜು ಸ್ಪರ್ಧೆ
ರಾಮನಗರ ಕ್ಷೇತ್ರಕ್ಕೆ ಜೆಡಿಎಸ್ನಿಂದ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರನ್ನು ಅಖಾಡಕ್ಕೆ ಇಳಿಸುವ ಚಿಂತನೆ ನಡೆದಿತ್ತಾದರೂ ಕುಟುಂಬದ ರಾಜಕಾರಣದ ಆರೋಪಕ್ಕೆ ಮತ್ತೊಮ್ಮೆ ಒಳಗಾಗಬೇಕಾಗುತ್ತಿದೆ ಎನ್ನುವ ಕಾರಣದಿಂದ ಅದನ್ನು ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಚ್ ಡಿ ಕುಮಾರಸ್ವಾಮಿಯವರ ಆಡಳಿತಾವಧಿಯಲ್ಲಿ ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾಗಿ ಕೈಗೊಂಡ ಯೋಜನೆಗಳು ಜೆಡಿಎಸ್ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಎಚ್ ಡಿ ದೇವೇಗೌಡರು ಮತ್ತು ಎಚ್ ಡಿ ಕುಮಾರಸ್ವಾಮಿಯವರೊಂದಿಗೆ ಅವಿನಾಭಾವ ಸಂಬಂಧವಿಟ್ಟುಕೊಂಡಿರುವ ರಾಮನಗರದ ಜನತೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಸಂಘಟಿತ ಹೋರಾಟ ನಡೆಸಲು ಅಣಿಯಾಗಿದ್ದಾರೆ.
ಜೆಡಿಎಸ್ ಪಾಳೆಯದಲ್ಲಿ ಪಕ್ಷ ಸಂಘಟನೆಗಾಗಿ ಪ್ರಾಮಾಣಿಕರಾಗಿ ಕಾರ್ಯನಿರ್ವಹಿಸುವ ಮಂದಿಗೆ ಪಕ್ಷ ಮನ್ನಣೆ ನೀಡುತ್ತದೆಂದು ಎಚ್ ಡಿ .ಕುಮಾರಸ್ವಾಮಿಯವರು ಹಲವಾರು ಬಾರಿ ಹೇಳಿದ್ದಾರೆ. ಅದಕ್ಕೆ ನಿದರ್ಶನವೆಂಬಂತೆ ಪ್ರತಿಷ್ಠೆಯ ಕಣವಾಗಿರುವ ರಾಮನಗರ ವಿಧಾನಸಭಾಕ್ಷೇತ್ರದ ಉಪಚುನಾವಣೆಗೆ ಪಕ್ಷದಲ್ಲಿ ಕಾರ್ಯಕರ್ತರಾಗಿ ಪದಾಧಿಕಾರಿಯಾಗಿ ಹಲವಾರು ವರ್ಷಗಳಿಂದ ಪಕ್ಷಕ್ಕೆ ನಿಷ್ಠರಾಗಿರುವ ಅವ್ವೇರಹಳ್ಳಿ ಕೆ.ರಾಜುರವರನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮೂಲಕ ಊಹಾಪೋಹಗಳಿಗೆ ತೆರೆಎಳೆದಿದ್ದಾರೆ.
ಇಲ್ಲಿಯವರೆಗೂ ಪಕ್ಷದ ಸಂಘಟನೆಗೆ ಶ್ರಮಿಸಿದ್ದಂತಹ ಕೆ.ರಾಜುರವರು ಪಕ್ಷದ ಅಭ್ಯರ್ಥಿಯಾಗಲು ಕುಮಾರಸ್ವಾಮಿಯವರು ಇಟ್ಟಿರುವ ನಂಬಿಕೆಯೇ ಕಾರಣವಾಗಿದೆ. ಕುಮಾರಸ್ವಾಮಿಯವರ ಜನಪರ ಆಢಳಿತವೇ ಕೆ.ರಾಜುವರ ಗೆಲುವಿಗೆ ಪೂರಕವಾಗಲಿದೆ. ಮತ್ತು ಜೆಡಿಎಸ್ ವರಿಷ್ಠರು ವಿಶ್ವಾಸವಿಟ್ಟು ಕೆ.ರಾಜುರವರ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿರುವುದ ಸಾಮಾನ್ಯವಾಗಿ ಅಭ್ಯರ್ಥಿ ಕೆ.ರಾಜುರವರ ಕುಟುಂಬದ ಸದಸ್ಯರಲ್ಲಿ ಸಂತಸ ಮನೆಮಾಡುವಂತಾಗಿದೆ. ಬೆಳಿಗ್ಗೆಯಿಂದಲೆ ಮನೆಗೆ ಬಂದ ಕಾರ್ಯಕರ್ತರುಗಳಿಗೆ ಸಿಹಿಹಂಚಿದ ಕುಟುಂಬದ ಸದಸ್ಯರು ಸಂಭ್ರಮವ್ಯಕ್ತಪಡಿಸಿದರು.
ಜೆಡಿಎಸ್ ವರಿಷ್ಠರುಗಳು ಸಾಮಾನ್ಯ ಕಾರ್ಯಕರ್ತರ ಸೇವೆಯನ್ನ ಪರಿಗಣಿಸಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದಾರೆ. ಇದರಿಂದ ಪಕ್ಷದಲ್ಲಿರುವ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಪ್ರಾಮಾಣಿಕವಾಗಿ ಪಕ್ಷದ ಸಂಘಟನೆ ಮಾಡುವ ಸಾಮಾನ್ಯ ಕಾರ್ಯಕರ್ತರಿಗೆ ಮನ್ನಣೆ ನೀಡುವ ಮೂಲಕ ಟೀಕಾಕಾರರ ಬಾಯಿಮುಚ್ಚಿಸಿದ್ದಾರೆ. ಲೋಕಸಭಾ ಚುನಾವಣೆಯ ಗೆಲುವಿನಂತೆ ಈ ಬಾರಿಯ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಜಯಭೇರಿ ಬಾರಿಸಲಿದ್ದಾರೆಂದು ಪಕ್ಷದ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)