ಒತ್ತುವರಿಗೆ ಜಮೀನು ಸಂರಕ್ಷಣೆ ಪಡೆ ರಚನೆ : ಸಿಎಂ
ವಿಧಾನಸಭೆಯಲ್ಲಿ ಹೇಳಿಕೆ ನೀಡಿದ ಮುಖ್ಯಮಂತ್ರಿ, ರಾಜ್ಯಾದ್ಯಂತ ಒತ್ತುವರಿಯಾಗಿರುವ ಸರಕಾರಿ ಜಮೀನನ್ನು ಸಂರಕ್ಷಿಸಲು ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣ್ಯನ್ ಅಧ್ಯಕ್ಷತೆಯಲ್ಲಿ ಈ ಪಡೆಯನ್ನು ರಚಿಸಲಾಗಿದೆ. ಒತ್ತುವರಿ ಮಾಡಿರುವವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ, ಯಾವುದೇ ಒತ್ತಡಕ್ಕೆ ಮಣಿಯದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಒತ್ತುವರಿ ಮಾಡಿರುವ 33 ಸಾವಿರ ಎಕರೆ ಜಮೀನಿಗೂ ಬೇಲಿ ಹಾಕಲಾಗುವುದು. ಜೊತೆಗೆ ವಿಶೇಷ ವಕೀಲರನ್ನು ನೇಮಕ ಮಾಡಲಾಗುವುದು. ಅಲ್ಲದೇ ಮೂರು ತಿಂಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸಿ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಲಾಗುವುದು ಎಂದು ಯಡಿಯೂರಪ್ಪ ವಿವರಿಸಿದರು.
ಪ್ರತ್ಯೇಕ ಕೋರ್ಟ್ ಪ್ರತಿಪಕ್ಷಗಳು ಪಟ್ಟು
ಸರಕಾರಿ ಜಮೀನು ಒತ್ತುವರಿಗೆ ಸಂಬಂಧಿಸಿದಂತೆ ಎಟಿ ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ನೀಡಿರುವ ಅಂತಿಮ ವರದಿಯನ್ನು ಸದನಕ್ಕೆ ಒಪ್ಪಿಸಬೇಕು ಹಾಗೂ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದವು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಜಂಟಿ ಸಮಿತಿ ನೀಡಿರುವ ವರದಿಯನ್ನು ಸದನಕ್ಕೆ ಒಪ್ಪಿಸಿ, ಯಾವ ಯಾವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಮೇಲೆ ಕ್ರಮ ಕೈಗೊಳ್ಳಲಾಗಿದೆ ತಿಳಿಸಿ, 9 ಸಾವಿರ ಎಕರೆ ಭೂಮಿ ಮಾರಾಟ ಮಾಡಿ ಎಷ್ಟು ಹಣ ಬಂದಿದೆ ತಿಳಿಸಿ, ಕಾನೂನು ಕಾರ್ಯದರ್ಶಿಯೊಬ್ಬರನ್ನು ಸದಸ್ಯರನ್ನಾಗಿ ಮಾಡಿ ಎಂದರು. ಒತ್ತುವರಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮೇಲೂ ಮೊಕದ್ದಮೆ ಹೂಡಿ ಎಂದು ಅವರು ಒತ್ತಾಯಿಸಿದರು.
(ದಟ್ಸ್ ಕನ್ನಡ ವಾರ್ತೆ)