ಉತ್ತಮ ಕಾರ್ಯಕ್ಕೆ ಪತ್ರಕರ್ತರ ಲೇಖನಿ ಬಳಕೆಯಾಗಲಿ
ಪಟ್ಟಣದಲ್ಲಿ ಶಿಕಾರಿಪುರ ತಾಲ್ಲೂಕು ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಸತೀಶ್ ಗೌಡ ಮಾತನಾಡುತ್ತಿದ್ದರು. ಇವತ್ತಿನ ದಿನಗಳಲ್ಲಿ ಪತ್ರಿಕೋದ್ಯಮ ಎನ್ನುವುದು ಒಂದು ರೀತಿಯ ವ್ಯಾಪಾರದಂತೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಲವು ಪತ್ರಕರ್ತರು ತಮ್ಮ ಮೂಲ ಕಾರ್ಯವನ್ನು ಮರೆಯುತ್ತಿದ್ದು, ಹಣದ ಹಾಗೂ ರಾಜಕಾರಣಿಗಳ ಹಿಂದೆ ಬೀಳುತ್ತಿದ್ದಾರೆ ಎಂದು ವಿಷಾದಿಸಿದರು.
ತಾವು ಹಳ್ಳಿಯ ರೈತರೊಬ್ಬರ ಮಗನಾಗಿದ್ದು, ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅಕ್ರಮಗಳನ್ನು ಬಯಲಿಗೆಳೆಯುವ ಸಲುವಾಗಿಯೇ ಸ್ವಂತ ಪತ್ರಿಕೆಯೊಂದನ್ನು ಆರಂಭಿಸಿದರುವುದು ಬದಲಾಗಿ ಹಣ ಮಾಡುವುದಕ್ಕಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲಾ ಮಾಧ್ಯಮ ವೇದಿಕೆಯ ಕಾರ್ಯದರ್ಶಿ ಡಿ.ಸಿ.ಪೀಟರ್ ಮಾತನಾಡಿ, ಇವತ್ತಿನ ದಿನಗಳಲ್ಲಿ ಪೀತ ಪತ್ರಿಕೋದ್ಯಮಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿರುವುದು ದುರದೃಷ್ಟಕರವಾಗಿದೆ. ಇದಕ್ಕೆ ಮುಖ್ಯವಾಗಿ ಇಂದಿನ ರಾಜಕಾರಣಿಗಳು ಕಾರಣರಾಗಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಬಿ.ಎಸ್.ಹಳದಪ್ಪ ಮಾತನಾಡಿ, ಕೆಲವು ರಾಜಕಾರಣಿಗಳು ಆಮಿಷ ತೋರಿಸುವ ಮೂಲಕ ಪತ್ರಕರ್ತರ ನಡುವೆ ಬಿರುಕು ಹುಟ್ಟಿಸುವಂತಹ ಕಾರ್ಯ ಮಾಡುತ್ತಿದ್ದಾರೆ. ಇಂತವರನ್ನು ದೂರವಿಡುವಂತಹ ಕಾರ್ಯ ಪತ್ರಕರ್ತರಿಂದಾಗಬೇಕಿದೆ. ಇವರುಗಳು ತಮ್ಮ ವೈಯುಕ್ತಿಕ ಹಿತಾಸಕ್ತಿಗೆ ಪತ್ರಕರ್ತರನ್ನು ಬಳಕೆ ಮಾಡಿಕೊಳ್ಳುತ್ತಿರುವುದು ವಿಷಾದಕ ಸಂಗತಿಯಾಗಿದೆ ಎಂದರು. ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ಯಾರಿಗೂ ಹೆದರದೆ ಬಯಲಿಗೆ ಎಳೆಯುವಂತಹ ಕಾರ್ಯ ಎಲ್ಲಾ ಪತ್ರಕರ್ತರು ಮಾಡಿದಾಗ ಮಾತ್ರ ಬದಲಾವಣೆ ತರಲು ಸಾಧ್ಯ ಎಂದರು.
ಪುರಸಭಾ ಸದಸ್ಯ ಸಿರಿಯಣ್ಣಾರ ರೇವಣಪ್ಪ, ಮುಖಂಡರುಗಳಾದ ಸ.ನ.ಮಂಜಪ್ಪ, ಟಿ.ಮಹದೇವಪ್ಪ, ಹಿರಿಯ ನಾಗರೀಕ ಪುಂಡಲೀಕರಾವ್, ಎಸ್.ಯೋಗೀಶ್, ವಕೀಲ ಕೋಡೆಪ್ಪ, ಹುಲುಗಾವಲು ಕುಮಾರ್, ಗಂಗೊಳ್ಳಿ ಸತೀಶ್, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಸುರೇಶ್, ಡಾ.ಐ.ಎಫ್.ಮಳಗಿ, ಗಾಯಕ ಶ್ರೀಧರ್, ಬಾಬಾಜಾನ್ ಸೇರಿದಂತೆ ಹಲವರು ಹಾಜರಿದ್ದರು.