ಜು.28ರಂದು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ
ಬೆಂಗಳೂರು, ಜು. 25 : ಕರ್ನಾಟಕ ಸಾಹಿತ್ಯ ಅಕಾಡೆಮಿಯು ಜುಲೈ 28ರಂದು ಸಂಜೆ 6 ಗಂಟೆಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಬಸವ ಭವನದಲ್ಲಿ 2008ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ 2007ರ ಪುಸ್ತಕ ಬಹುಮಾನಗಳ ವಿತರಣಾ ಸಮಾರಂಭವನ್ನು ಏರ್ಪಡಿಸಿದೆ.
ಸಂಸ್ಕೃತಿ ಚಿಂತಕರಾದ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರೊ. ಅ.ರಾ. ಮಿತ್ರ, ಪ್ರೊ. ಎಚ್.ಎಂ. ಬೀಳಗಿ, ವಿಷ್ಣು ನಾಯ್ಕ, ಪ್ರೊ. ಮಲ್ಲಿಕಾರ್ಜುನ ಹಿರೇಮಠ ಹಾಗೂ ಲಕ್ಷ್ಮಣ್ ಅವರು 2008ನೇ ಸಾಲಿನ ಗೌರವ ಪ್ರಶಸ್ತಿ ಗೌರವ ಪಡೆಯಲಿದ್ದಾರೆ.
2007ನೇ ಸಾಲಿನ ಪುಸ್ತಕ ಬಹುಮಾನಗಳನ್ನು ಕಾವ್ಯ, ಕಾದಂಬರಿ, ನಾಟಕ, ಸಣ್ಣಕತೆ, ಜೀವನ ಚರಿತ್ರೆ, ಪ್ರವಾಸ ಸಾಹಿತ್ಯ, ವಿಜ್ಞಾನ, ಮಕ್ಕಳ ಸಾಹಿತ್ಯ ಸಂಶೋಧನೆ ಮುಂತಾದ ಹಲವಾರು ಪ್ರಕಾರಗಳಲ್ಲಿ ನೀಡುತ್ತಿದ್ದು ನೇಮಿಚಂದ್ರ, ಬಸವರಾಜ ವಕ್ಕುಂದ, ಡಿ.ಎಸ್. ನಾಗಭೂಷಣ್, ಬಸವರಾಜ ಹೂಗಾರ್, ಸಂಗಮೇಶ ಕೋಟಿ, ಪ್ರೊ. ಎಸ್. ಜಿ. ಸಿದ್ದರಾಮಯ್ಯ ಮುಂತಾದ ಹಲವು ಲೇಖಕರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಗುತ್ತಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ. ಎಂ.ಎಚ್. ಕೃಷ್ಣಯ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಗೌರವ ಪ್ರಶಸ್ತಿ ಪುರಸ್ಕೃತರ ಸಾಹಿತ್ಯಿಕ ಸಾಧನೆ ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 5ರಿಂದ 6 ಗಂಟೆಯವರೆಗೆ ರೇಣುಕ ಮಾಲಾಪುರ ಅವರಿಂದ ಶ್ರೀಕೃಷ್ಣ ಪಾರಿಜಾತ ಹಾಡುಗಾರಿಕೆಯನ್ನು ಏರ್ಪಡಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)