ಹೊಸನಗರದ ಬೆಣಕಿ ಗ್ರಾಮದಲ್ಲಿ ಜೋಡಿ ಕೊಲೆ
ಹೊಸನಗರ, ಜು. 24 : ತಾಲೂಕಿನ ತ್ರಿವೇಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಣಕಿ ಗ್ರಾಮದಲ್ಲಿ ಪತ್ನಿ ಹಾಗೂ ಅತ್ತೆಯನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿ ಅಳಿಯನೊಬ್ಬ ಪರಾರಿಯಾಗಿರುವ ಘಟನೆ ನಡೆದಿದೆ.
ಅತ್ತೆ ಮಂಜಮ್ಮ (58) ಹಾಗೂ ಪತ್ನಿ ಗೀತಾ (19) ಕೊಲೆಯಾದ ಮಹಿಳೆಯರಾಗಿದ್ದು, ಆರೋಪಿ ಅಳಿಯ ನಾಗರಾಜ್ ಪರಾರಿಯಾಗಿದ್ದಾನೆ. ಕಳೆದ 4 ತಿಂಗಳ ಹಿಂದೆ ಸಾಗರ ತಾಲ್ಲೂಕಿನ ತ್ಯಾಗರ್ತಿ ಗ್ರಾಮದ ನಾಗರಾಜ್, ಗೀತಾಳನ್ನು ಮದುವೆಯಾಗಿದ್ದನು. ಬುಧವಾರ ರಾತ್ರಿ ಈ ಕೊಲೆ ನಡೆದಿದ್ದು, ಮರುದಿನ ಯಾರೂ ಮನೆಯಿಂದ ಹೊರಬಾರದಿರುವುದನ್ನು ಗಮನಿಸಿದ ಗ್ರಾಮಸ್ಥರು ಗುರುವಾರ ರಾತ್ರಿ ಮನೆಯೊಳಗೆ ಹೋದ ನಂತರವೇ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಹೊಸನಗರ ಸರ್ಕಲ್ ಇನ್ಸ್ಪೆಕ್ಟರ್ ಪುರುಶೋತ್ತಮ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಕೊಲೆಗೆ ಕಾರಣವೇನೆಂಬುದು ತಿಳಿದಿಲ್ಲ. ಅಳಿಯ ನಾಗರಾಜ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಯ ನಂತರವೇ ನಿಜವಾದ ಸಂಗತಿ ತಿಳಿಯಲಿದೆ ಎಂದು ತಿಳಿಸಿದ್ದಾರೆ. ಪ್ರಕರಣವನ್ನು ಹೊಸನಗರ ಠಾಣೆಯಲ್ಲಿ ದಾಖಲಿಸಲಾಗಿದ್ದು, ಪರಾರಿಯಾಗಿರುವ ನಾಗರಾಜ್ನ ಪತ್ತೆಗೆ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ.
(ದಟ್ಸ್ ಕನ್ನಡ ಜಿಲ್ಲಾ ಸುದ್ದಿ)