ಕರ್ನಾಟಕ ರೈತರಿಗೆ ಕೃಷಿ ಸಚಿವರ ತಾಂಬೂಲ!
ನವದೆಹಲಿ, ಜು. 24- ಕರ್ನಾಟಕ ರಾಜ್ಯದಲ್ಲಿ ಬೆಳೆಯುವ ಕೆಂಪು ಮತ್ತು ಬಿಳಿ ಅಡಿಕೆಗಳನ್ನು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿಯಲ್ಲಿ ಕೊಂಡುಕೊಳ್ಳುವ ಯಾವುದೇ ಪ್ರಸ್ತಾವನೆಗಳು ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೃಷಿ ಇಲಾಖೆ ರಾಜ್ಯ ಸಚಿವ ಕೆ.ವಿ. ಥಾಮಸ್ ಅವರು ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ ಸಂಸದರಾದ ಡಿ.ವಿ. ಸದಾನಂದ ಗೌಡ ಹಾಗೂ ಬಿ.ವೈ. ರಾಘವೇಂದ್ರ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಕರ್ನಾಟಕ ಸರ್ಕಾರವು 2009ರ ಜನವರಿ 28ರಂದು ಕೃಷಿ ಇಲಾಖೆಗೆ ಈ ಸಂಬಂಧ ಪ್ರಸ್ತಾವನೆಯೊಂದನ್ನು ಸಲ್ಲಿಸಿತ್ತು. ಅದರಲ್ಲಿ 10,000(6000 ಟನ್ ಬಿಳಿ ಅಡಿಕೆ ಮತ್ತು 4,000ಟನ್ ಕೆಂಪು ಅಡಿಕೆ) ಟನ್ ಅಡಿಕೆಯನ್ನು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ ಕೇಂದ್ರ ಸರ್ಕಾರ ಕೊಂಡುಕೊಳ್ಳಬೇಕು ಎಂದು ಕೋರಲಾಗಿತ್ತು. ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯ ನಿಯಮಾವಳಿಗಳ ಪ್ರಕಾರ 01-03-2009ರಿಂದ 31-03-2009ರ ಅವಧಿಯಲ್ಲಿ ಲಭ್ಯ ಇರುವ ಅಡಿಕೆಯನ್ನು ಕೊಂಡುಕೊಳ್ಳಲು ಅನುಮತಿ ನೀಡಲಾಯಿತು ಎಂದು ತಿಳಿಸಿದರು.
ತದನಂತರ ರಾಜ್ಯ ಸರ್ಕಾರದ ನಿಖರ ಮನವಿಯ ಮೇರೆಗೆ ಅಡಿಕೆ ಕೊಂಡುಕೊಳ್ಳುವಿಕೆಯ ದಿನಾಂಕವನ್ನು ದಿನಾಂಕ ಏಪ್ರಿಲ್ 30ರ ವರೆಗೆ ವಿಸ್ತರಿಸಲಾಯಿತು. ಆ ಮೇಲೆ ಅದನ್ನು ಜೂನ್ 30ರವರೆಗೆ ಮತ್ತೊಮ್ಮೆ ವಿಸ್ತರಣೆ ಮಾಡಲಾಯಿತು. ಆದರೆ, ರಾಜ್ಯ ಸರ್ಕಾರದ ಮನವಿಯಂತೆ ರಾಜ್ಯದಲ್ಲಿ ಬೆಳೆಯು 1.08 ಮೆಟ್ರಿಕ್ ಟನ್ ಅಡಿಕೆಯನ್ನೆಲ್ಲ ಕೊಂಡುಕೊಳ್ಳಲು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿಯಲ್ಲಿ ಅವಕಾಶವಿಲ್ಲ. ಈ ಯೋಜನೆಯಡಿಯಲ್ಲಿ ಕೇವಲ ಶೇ. 10ರಷ್ಟು ಉತ್ಪನ್ನಗಳನ್ನು ಮಾತ್ರ ಕೊಂಡುಕೊಳ್ಳಲು ಅವಕಾಶವಿದೆ. ಈ ಕಾರಣದಿಂದ ಈ ವಿಚಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಯಾವುದೇ ಪ್ರಸ್ತಾವಣೆಗಳು ಇದೀಗ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಸಚಿವರು ವಿವರಿಸಿದರು.
(ದಟ್ಸ್ ಕನ್ನಡವಾರ್ತೆ)