ಆದಿಚುಂಚನಗಿರಿ ಶ್ರೀಗಳಿಗೆ ರಜತ ತುಲಾಭಾರ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಎಲ್ಲಾ ವರ್ಗದ ಭಕ್ತಸಮೂಹ ಇಟ್ಟಿರುವ ವಿಶ್ವಾಸ ಪ್ರೀತಿಯಿಂದ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ನೀಡಿ ಗೌರವಿಸಿವೆ. ಡಾಕ್ಟರೇಟ್ ನಮ್ಮ ಸೇವೆಗೆ ನೆಪ ಮಾತ್ರ. ಆದಿಚುಂಚನಗಿರಿ ಮೊದಲಿನಿಂದ ಸಮರ್ಪಣಾಮನೋಭಾವದೊಂದಿಗೆ ಸೇವೆ ನಡೆಸುತ್ತಿದೆಯೋ ಅದೇ ರೀತಿ ಸೇವೆಯನ್ನ ಮುಂದುವರೆಸುತ್ತದೆ ಎಂದು ಹೇಳಿದರು.
ಆದಿಚುಂಚನಗಿರಿ ಮಠ ಬಡವರ ಮಕ್ಕಳ ಬದುಕಿಗೆ ದಾರಿದೀಪವಾಗಿ, ಎಲ್ಲಾ ವರ್ಗದ ಜನತೆಯ ಆರೋಗ್ಯ ರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದೆ. ಮತ್ತು ಗಿಡ ನೆಟ್ಟು ಪರಿಸರ ಸಂರಕ್ಷಣೆಯ ಜಾಗೃತಿಯನ್ನ ಗ್ರಾಮೀಣ ಪ್ರದೇಶದಲ್ಲಿ ನಡೆಸುತ್ತಿದೆ, ಹಾಗೂ ಹಿಂದೂ ಸಂಸ್ಕೃತಿಯ ಪೂಜ್ಯನೀಯ ಗೋವುಗಳ ರಕ್ಷಣೆಗೆ ಆದಿಚುಂಚನಗಿರಿ ಹೆಚ್ಚಿನ ಒತ್ತು ನೀಡಿದೆ. ಎಲ್ಲಾ ಕ್ಷೇತ್ರಗಳಲ್ಲಿ ಗ್ರಾಮೀಣ ಪ್ರತಿಭೆಗಳು ಬೆಳವಣಿಗೆ ಹೊಂದಲು ಆದಿಚುಂಚನಗಿರಿ ಸಂಸ್ಥಾನ ಪೂರಕವಾದ ಯೋಜನೆಗಳನ್ನ ರೂಪಿಸುತ್ತಿದೆ ಎಂದು ಬಾಲಗಂಗಾಧರನಾಥಶ್ರೀಗಳು ತಿಳಿಸಿದರು.
ಅಭಿನಂದನಾಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ಚೇತನ ಪಾಟೀಲ್ ಪುಟ್ಟಪ್ಪನವರು ಬಾಲಗಂಗಾಧರನಾಥಶ್ರೀಗಳ ಸಾಧನೆಯನ್ನ ಪ್ರಶಂಸಿಸಿದರು. ಬಾರತದಲ್ಲಾಗಲಿ ವಿದೇಶಗಳಲ್ಲಾಗಲೀ ಬಾಲಗಂಗಾಧರನಾಥ ಶ್ರೀಗಳಂತಹ ಪವಾಡ ಪುರುಷರನ್ನ ನೋಡಿಯೇ ಇಲ್ಲ. ಸಾಮಾನ್ಯವಾಗಿ ನಾನು ಬಹುತೇಕ ಸ್ವಾಮೀಜಿಗಳಿಗೆ ನಮಸ್ಕರಿಸುವುದಿಲ್ಲ. ನಾನು ನಮಸ್ಕರಿಸುವ ಸ್ವಾಮೀಜಿಗಳಲ್ಲಿ ಬಾಲಗಂಗಾಧರನಾಥ ಶ್ರೀಗಳು ಅಗ್ರಗಣ್ಯರು. ಪರಮಪೂಜ್ಯರು ನ್ಯಾಯಾಂಗ, ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಅಗ್ರಗಣ್ಯರಾಗಿ ಸಮರ್ಪಣಾಮನೋಭಾವದೊಂದಿಗೆ ಸೇವೆ ನೀಡುತ್ತಿದ್ದಾರೆ. ಬಾಲಗಂಗಾಧರ ಶ್ರೀಗಳಂತೆ ಎಲ್ಲಾ ಮಠಾಧೀಶರುಗಳು ಜಾತ್ಯಾತೀತ ಮನೋಭಾವವನ್ನ ಬೆಳೆಸಿಕೊಳ್ಳಬೇಕು ಎಂದು ಪುಟ್ಟಪ್ಪನವರು ಅಭಿಪ್ರಾಯಪಟ್ಟರು.
ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಬಾಲಗಂಗಾಧರನಾಥಶ್ರೀಗಳ ಖ್ಯಾತಿ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಆಡುಮುಟ್ಟದ ಸೊಪ್ಪಿಲ್ಲವೆಂಬಂತೆ ಸ್ವಾಮೀಜಿಗಳು ಎಲ್ಲಾ ಕ್ಷೇತ್ರಗಳ ಪ್ರಗತಿಗಾಗಿ ಹಲವಾರು ವರ್ಷಗಳಿಂದ ಸೇವೆ ನಡೆಸಿಕೊಂಡು ಬರುತ್ತಿದ್ದಾರೆ. ಸಮಾಜದಲ್ಲಿ ಸಮಾನತೆ ಮತ್ತು ಸ್ವಾಸ್ಥ್ಯ ಮೂಡಿಸಲು ಬಾಲಗಂಗಾಧರನಾಥ ಶ್ರೀಗಳು ಸಮಾಜಕ್ಕೆ ಮಾರ್ಗದರ್ಶಕರಾಗಿದ್ದಾರೆ. ಶ್ರೀಗಳ ಸೇವೆಯನ್ನ ಗುರುತಿಸಿ ಡಾಕ್ಟರೇಟ್ ಪದವಿ ನೀಡಿರುವುದು ಶ್ಲಾಘನೀಯವೆಂದರು.
ಶ್ರೀಗಳ ಸೇವಾಮನೋಭಾವವನ್ನು ಕೊಂಡಾಡಿದ ಮಾಜಿ ಶಾಸಕ ಯೋಗೀಶ್ವರ್, ಬಾಲಗಂಗಾಧರನಾಥಶ್ರೀಗಳಿಗೆ ತಮ್ಮ ಹುಟ್ಟೂರಿನಲ್ಲಿ ಅಭಿನಂದನೆ ಸಲ್ಲಿಸುತ್ತಿರುವುದು ಸ್ವಾಗತಾರ್ಹವಾದ ವಿಚಾರವಾಗಿದೆ. ಸಮಾಜದಲ್ಲಿ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಸರ್ವಧರ್ಮಗಳ ಸಮನ್ವಯತೆ ಮೂಡಿಸುವ ಪ್ರಯತ್ನ ಮಾಡುತ್ತಿರುವ ಶ್ರೀಗಳ ಕಾರ್ಯ ಶ್ಲಾಘನೀಯವಾದುದು. ಬಾಲಗಂಗಾಧರಶ್ರೀಗಳಿಗೆ ಹೆಚ್ಚಿನ ಆರೋಗ್ಯ ಆಯುಷ್ಯ ದೊರಕಿ ಸಮಾದ ಸೇವೆ ಮುಂದುವರೆಸಲಿ ಎಂದು ಅಭಿನಂದಿಸಿದರು.
ಬಾಲಗಂಗಾಧರನಾಥ ಶ್ರೀಗಳನ್ನ ಅಶ್ವರಥದ ಮೇಲೆ ಬಿಡದಿಯ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಜಾನಪದ ಕಲಾತಂಡಗಳ ಕಲಾವೈಭವ ಆಕರ್ಷಣೀಯವಾಗಿತ್ತು. ಬಾಲಗಂಗಾಧರನಾಥ ಶ್ರೀಗಳಿಗೆ ಭಕ್ತಸಮೂಹ 80 ಕೆಜಿ ಬೆಳ್ಳಿಯ ತುಲಾಭಾರ ಮತ್ತು ಪುಷ್ಪಾರ್ಚನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬಿಡದಿಯ ನಿತ್ಯಾನಂದಸ್ವಾಮಿ ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸಿದ ಗಣ್ಯರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಣ್ಣ, ಮಂಜುನಾಥ್, ಶ್ರೀನಿವಾಸ್, ಸಿ.ಪಿ.ರಾಜೇಶ್, ತಾ.ಪಂ.ಅಧ್ಯಕ್ಷ ಬ್ಯಾಮಪ್ಪ, ಶೇಖರ್ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಮತ್ತಿತರು ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು.