ಕಸಬ್ ಪ್ರಕರಣ ಕೈಬಿಟ್ಟ ಅಬ್ಬಾಸ್ ಕಜ್ಮಿ
ಅಜ್ಮಲ್ ಅಮೀರ್ ಕಸಬ್ ನನ್ನ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಇಷ್ಟಾದ ನಂತರ ಮುಂದಿನ ದಿನಗಳಲ್ಲಿ ಆತನ ಪರವಾಗಿ ವಿಚಾರಣೆ ನಡೆಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಕಸಬ್ ಪರ ವಿಚಾರಣೆಯನ್ನು ಕೈಬಿಡಲು ನಿರ್ಧರಿಸಿದ್ದೇನೆ ಎಂದು ಅಬ್ಬಾಸ್ ಕಜ್ಮಿ ತಿಳಿಸಿದ್ದಾರೆ. ಆದರೆ, ಇದನ್ನು ತೀವ್ರವಾಗಿ ವಿರೋಧಿಸಿರುವ ಸರಕಾರಿ ವಕೀಲ ಉಜ್ವಲ್ ನಿಕ್ಕಂ, ಕಸಬ್ ಪರ ವಕೀಲ ಅಬ್ಬಾಸ್ ಕಜ್ಮಿ ಅವರ ಮತ್ತೊಂದು ನಾಟಕ ಶುರು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನ್ನ ಮೇಲೆ ಯಾರ ಒತ್ತಡವೂ ಇಲ್ಲ. ಮಾಡಿದ ತಪ್ಪಿಗಾಗಿ ನಾನೇ ಸ್ವಯಂ ಪ್ರೇರಣೆಯಿಂದ ತಪ್ಪೊಪ್ಪಿಕೊಂಡಿದ್ದೇನೆ. ನ್ಯಾಯಾಲಯ ನೇಣಿಗೇರಿಸುವಂತೆ ಆದೇಶ ನೀಡಿದರೆ, ಅದಕ್ಕೂ ನಾನು ಸಿದ್ಧ ಎಂದು ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದ.
ಈ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದ ಕಸಬ್ ಪರ ವಕೀಲ ಅಬ್ಬಾಸ್ ಕಜ್ಮಿ, ಕಸಬ್ ನಿಗೆ ಮಾನಸಿಕ ಹಿಂಸೆ ನೀಡಲಾಗಿದೆ. ಪೊಲೀಸರು ಆತನಿಗೆ ಚಿತ್ರಹಿಂಸೆ ನೀಡಿದ್ದಲ್ಲದೇ ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆ ನೀಡುವಂತೆ ಒತ್ತಡ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಕಸಬ್ ಹೇಳಿಕೆಯನ್ನು ತಪ್ಪೊಪ್ಪಿಗೆಯಂತೆ ಪರಿಗಣಿಸಬಾರದು ಎಂದು ಕಜ್ಮಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.
ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಕೊಂದಿದ್ದು, ಕಾಮಾ ಆಸ್ಪತ್ರೆ ಮೇಲೆ ಧಾಳಿ ಸೇರಿದಂತೆ ಮುಂಬೈನಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಿಗೆ ನೇರವಾಗಿ ಭಾಗಿ ಆಗಿದ್ದನ್ನು ಸೋಮವಾರ ಕಸಬ್ ಸ್ಪಷ್ಟಪಡಿಸಿದ್ದ. ಕಸಬ್ ಹೇಳಿಕೆ ಪ್ರತಿಕ್ರಿಯಿಸಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ, ಕಸಬ್ ಹೇಳಿಕೆಗೆ ಸಂಬಂಧಿಸಿದಂತೆ ಆತನ ವಕೀಲರು ಪೊಲೀಸರ ಒತ್ತಡಕ್ಕೆ ಮಣಿದು ಕಸಬ್ ಹೇಳಿಕೆ ನೀಡಿದ್ದಾನೆ ಎಂದು ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.
(ಏಜನ್ಸೀಸ್)