ವಿಕಲಾಂಗರನ್ನು ಮಣ್ಣಲ್ಲಿ ಹೂತಿಡುವುದು ಸರಿ : ಇಸ್ಲಾಂ
ಈ ಹೇಳಿಕೆಗೆ ವಿಧಾನಸಭೆಯಲ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಇಂತಹ ಮೂಢನಂಬಿಕೆಗಳನ್ನು ಸಹಿಸುವುದಿಲ್ಲ. ಇಂಥ ಆಚರಣೆಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಸೂರ್ಯಗ್ರಹಣದ ಸಮಯದಲ್ಲಿ ಅಂಗವಿಕಲ ಮಕ್ಕಳನ್ನು ಮಣ್ಣಲ್ಲಿ ಹೂತಿಟ್ಟರೆ ಗುಣಮುಖರಾಗುತ್ತಾರೆ ಎಂಬ ಮೂಢನಂಬಿಕೆ ಕಳೆದ ಅನೇಕ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ಚಿಕಿತ್ಸೆಗೆ ಒಳಗಾಗಿರುವ ಅನೇಕ ಅಂಗವಿಕಲರು ಗುಣಮುಖರಾಗಿದ್ದಾರೆ. ಇದರಲ್ಲಿ ತಪ್ಪೇನೂ ಕಾಣುತ್ತಿಲ್ಲ. ಇದನ್ನು ಮೂಢನಂಬಿಕೆ ಅಂತ ಹೇಗೆ ಹೇಳಲಾಗುತ್ತೆ ಎನ್ನುವುದು ಶಾಸಕ ಖಮರುಲ್ಲಾ ಇಸ್ಲಾಂ ಅವರ ವಾದವಾಗಿದೆ.
ಬುಧವಾರ ಬೆಳಗ್ಗೆ ಸೂರ್ಯಗ್ರಹಣದ ಸಮಯದಲ್ಲಿ ಮಣ್ಣಲ್ಲಿ ಅಂಗವಿಕಲರನ್ನು ಹೂತಿಡುವ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ನಾನೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಸೂಕ್ತ ಭದ್ರತೆ ಒದಗಿಸುವಂತೆ ಸೂಚಿಸಿದೆ. ಆದರೆ, ಸರಕಾರ ಇದರ ಬಗ್ಗೆ ಯಾವ ಕ್ರಮಕೈಗೊಳ್ಳಲಿದೆ ಎನ್ನುವುದು ಅವರಿಗೆ ಬಿಟ್ಟ ವಿಚಾರ. ಒಂದು ಮಾತಂತೂ ಸತ್ಯ. ಸೂರ್ಯಗ್ರಹಣದ ಸಮಯದಲ್ಲಿ ಮಣ್ಣಲ್ಲಿ ಅಂಗವಿಕಲರ ವಿಕಲಾಂಗ ಭಾಗವನ್ನು ಹೂತರೆ ಗುಣಮುಖರಾಗುವುದು ಗ್ಯಾರಂಟಿ. ನಮ್ಮಲ್ಲಿ ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ. ಜೊತೆಗೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇದರ ನಂಬಿಕೆ ಹೆಚ್ಚಾಗಿದ್ದು, ಅಲ್ಲಿನ ಸಾವಿರಾರು ಜನರು ಬುಧವಾರ ಈ ಚಿಕಿತ್ಸೆಗೆ ಅನೇಕ ಅಂಗವಿಕಲರನ್ನು ಒಳಪಡಿಸಿದ್ದರು ಎಂದು ಇಸ್ಲಾಂ ತಿಳಿಸಿದರು.
ಆದರೆ, ಬೀದರ್ ಸಂಸದ ಧರಂಸಿಂಗ್ ಮಾತ್ರ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬರ್ಥದಲ್ಲಿ ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದರು. ಇದು ಮೂಢನಂಬಿಕೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಗ್ರಹಣದ ಸಮಯದಲ್ಲಿ ಅಂಗವಿಕಲರನ್ನು ಮಣ್ಣಲ್ಲಿ ಹೂತಿಟ್ಟರೆ ಗುಣಮುಖರಾಗಿರುವ ಪ್ರಕರಣಗಳು ಕಣ್ಮುಂದಿವೆ. ಅದ್ದರಿಂದ ಇದರ ಬಗ್ಗೆ ಹೆಚ್ಚಿನ ಮಾತನಾಡಿಲು ಇಷ್ಟಪಡುವುದಿಲ್ಲ ಎಂದು ಅವರು ಜಾರಿಕೊಂಡರು.
ಬುಧವಾರ ಮಕ್ಕಳು ಸೇರಿದಂತೆ ನೂರಾರು ಮಂದಿ ಅಂಗವಿಕಲರನ್ನು ಮಣ್ಣಲ್ಲಿ ಹೂತಿಡಲಾಗಿತ್ತು. ಮುಸ್ಲಿಂಮರೇ ಹೆಚ್ಚಾಗಿ ವಾಸಿಸುವ ಮೋಮಿನಪುರಾದ ಖಾರಬೌಡಿ ಮೈದಾನ, ನಯಾ ಮೊಹಲ್ಲ, ಬಿಲಾಬಾದ್, ಜವಾಹರ್ ಹಿಂದ್ ಶಾಲೆಗಳ ಮೈದಾನದಲ್ಲಿ ಅಂಗವಿಕಲರ ಕುತ್ತಿಗೆಯಿಂದ ಕಾಲು ಮಟ್ಟದವರೆಗೆ ಮಣ್ಣಲ್ಲಿ ಹೂತಿಡಲಾಗಿತ್ತು. ದೊಡ್ಡವರ ಹುಚ್ಚಾಟಕ್ಕೆ ಅಂಗವಿಕಲ ಮಕ್ಕಳು ಜೀವಭಯದಿಂದ ಕಿರುಚಾಡುತ್ತಿದ್ದರೂ ಅಲ್ಲಿ ಕೇಳುವವರಿರಲಿಲ್ಲ. ಇಂಥ ಢಂಬಾಚಾರಕ್ಕೆ ಧಿಕ್ಕಾರವಿರಲಿ.
(ದಟ್ಸ್ ಕನ್ನಡ ವಾರ್ತೆ)