ರಾ ಭಯೋತ್ಪಾದಕ ಸಂಘಟನೆ : ಪಾಕ್
ಇಸ್ಲಾಮಾಬಾದ್, ಜು. 22 : ಪಾಕಿಸ್ತಾನದಲ್ಲಿ ನಡೆದ ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ದಾಳಿ ಹಾಗೂ ಪೊಲೀಸ್ ಆಕಾಡೆಮಿಯ ಮೇಲೆ ನಡೆದ ವಿಧ್ವಂಸಕದ ಕೃತ್ಯದಲ್ಲಿ ಭಾರತದ ರಿಸರ್ಚ್ ಅಂಡ್ ಎನಲೀಸಸ್ ವಿಂಗ್ (RAW) ನ ಕೈವಾಡವಿರುವ ಬಗ್ಗೆ ಎಂದು ಪಾಕಿಸ್ತಾನಕ್ಕೆ ಮಹತ್ವದ ಮಾಹಿತಿಗಳು ಲಭ್ಯವಾಗಿವೆ ಎಂದು ಪಾಕಿಸ್ತಾನದ ಪ್ರಮುಖ ಇಂಗ್ಲಿಷ್ ದೈನಿಕ ದಿ ಡಾನ್ ವರದಿ ಮಾಡಿದೆ.
ಪಾಕಿಸ್ತಾನದಲ್ಲಿ ಭಾರತದ ರಾ ಸಂಸ್ಥೆ ಭಯೋತ್ಪಾದನೆ ಚಟುವಟಿಕೆಗಳಲ್ಲಿ ನಿರತವಾಗಿದೆ. ಭಯೋತ್ಪಾದಕರಿಗೆ ಹಣಕಾಸು ಸೇರಿದಂತೆ ಎಲ್ಲ ರೀತಿಯಿಂದಲೂ ರಾ ಸಂಸ್ಥೆ ಸಹಾಯ ಮಾಡುತ್ತಿದೆ. ಅಲ್ಲದೇ ಅಪಘಾನಿಸ್ತಾನದ ಕಂದಹಾರ್ ಮತ್ತು ಬಲೋಚಿಗಳಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡುವುದಲ್ಲದೇ, ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಕುಮ್ಮಕ್ಕು ನೀಡುತ್ತದೆ. ನ್ಯಾಮ್ ಸಮಿತಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಭಾರತ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿರುವ ಪಾಕಿಸ್ತಾನದ ಪ್ರಧಾನಮಂತ್ರಿ ಯೂಸೆಫ್ ರಾಜಾ ಗಿಲಾನಿ ಅವರು ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಾಧಾರಗಳನ್ನು ನೀಡಿದ್ದಾರೆ ಎಂದು ಡಾನ್ ವರದಿ ಮಾಡಿದೆ. ಆದರೆ, ಈ ಮಹತ್ವದ ವಿಷಯವನ್ನು ಗುಪ್ತವಾಗಿ ಇಡಲಾಗಿತ್ತು ಎಂದು ಅದು ವರದಿ ಮಾಡಿದೆ.
ಭಾರತ ರಾ ಪಾಕಿಸ್ತಾನದಲ್ಲಿ ನಡೆಸುತ್ತಿರುವ ಕೃತ್ಯದ ಪ್ರಮುಖ ಸಾಕ್ಷ್ಯಾಧಾರಗಳನ್ನು ಅಮೆರಿಕ ಹಾಗೂ ಅಪಘಾನಿಸ್ತಾನಕ್ಕೆ ನೀಡಲಾಗಿದ್ದು. ಪಾಕಿಸ್ತಾನದ ಮೇಲೆ ನಡೆಯುತ್ತಿರುವ ಭಯೋತ್ಪಾದನೆ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಗಿಲಾನಿ ಮನವಿ ಮಾಡಿಕೊಂಡಿದ್ದಾರೆ ಎಂದು ದಿ ಡಾನ್ ವರದಿ ಮಾಡಿದೆ. ರಾ ಭಯೋತ್ಪಾದನೆಗೆ ಸಂಬಂಧಿಸಿದಂತೆ ಪಾಕಿಸ್ತಾನದಿಂದ ಸಾಕ್ಷ್ಯಾದಾರಗಳನ್ನು ಪಡೆದುಕೊಂಡಿರುವ ಪ್ರಧಾನಿ ಮನಮೋಹನ್ ಸಿಂಗ್, ಸಹಮತ ವ್ಯಕ್ತಪಡಿಸಿದ್ದು, ಈ ಕುರಿತು ತನಿಖೆ ನಡೆಸುವ ಭರವಸೆ ನೀಡಿದ್ದಾರೆ ಎಂದು ಪತ್ರಿಕೆ ಹೇಳಿದೆ.
(ಏಜನ್ಸೀಸ್)