ಜರುಗಿದ ಸಂಪೂರ್ಣ ಸೂರ್ಯಗ್ರಹಣ
ಬೆಂಗಳೂರು, ಜು. 22 : ಶತಮಾನದ ಸಂಪೂರ್ಣ ಸೂರ್ಯಗ್ರಹಣವನ್ನು ಇಂದು ದೇಶದಲ್ಲೆಡೆ ಜನತೆ ವೀಕ್ಷಿಸಿತು. ರಾಜ್ಯದಲ್ಲಿ ವಿವಿಧ ಮಠಗಳಲ್ಲಿ ಪೂಜೆ ಪುನಸ್ಕಾರ, ಶಾಂತಿ ಹೋಮಗಳು ನಡೆದರೆ, ಮತ್ತೊಂದು ಕಡೆಗೆ ಗ್ರಹಣದ ಸಮಯದಲ್ಲಿ ಜನತೆ ಹೊಂದಿದ್ದ ಮೂಡನಂಬಿಕೆಯನ್ನು ಹೋಗಲಾಡಿಸುವ ಪ್ರಯತ್ನಗಳು ಅನೇಕ ಕಡೆಗೆ ನಡೆದವು.
ಮುಖ್ಯವಾಗಿ ಚಿತ್ರದುರ್ಗ ಮಠದ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿಗಳು ಸೂರ್ಯಗ್ರಹಣದ ಸಮಯದಲ್ಲಿ ಉಪಹಾರ ಸೇವಿಸುವ ಮೂಲಕ ಮೂಡನಂಬಿಕೆಯನ್ನು ನಂಬಬೇಡಿ ಎಂಬ ಸಂದೇಶವನ್ನು ಸಾರಿದರು. ಸೂರ್ಯಗ್ರಹಣವಿರಲಿ ಯಾವ ಗ್ರಹಣಗಳು ಸಂಭಸಿದರೂ ಮನೆಯಲ್ಲಿರುವ ವಸ್ತುಗಳನ್ನು ಶುಚಿಗೊಳಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಈ ಮೂಡನಂಬಿಕೆಗೆ ಕಿವಿಗೊಡಬೇಡಿ ಎನ್ನುವುದು ಶ್ರೀಗಳ ಸಂದೇಶ. ನಿಸರ್ಗದಲ್ಲಿ ನಡೆಯುವಂತ ಪ್ರಕ್ರಿಯೆಗಳನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಜನರಲ್ಲಿ ವಿಚಿತ್ರ ಮೂಡನಂಬಿಕೆಗಳನ್ನು ತುಂಬಿದ್ದಾರೆ. ಇಂತಹ ಕಾರ್ಯಗಳ ನಿರಂತರವಾಗಿ ಮುಂದುವರೆಸಿಕೊಂಡು ಬರಲಾಗಿದೆ. ಆದರೆ, ಗ್ರಹಣದಿಂದ ಯಾವ ರೀತಿಯ ಅಪಾಯ ಇಲ್ಲ ಎನ್ನುವ ಪ್ರಯತ್ನ ಇದಾಗಿದೆ.
ಬಳ್ಳಾರಿಯ ರೆಡ್ಡಿ ಬಡಾವಣೆಯ ಮೇಡಂ ಕ್ಯೂರಿ ಅಕಾಡಮೆಯಲ್ಲಿ ಸೂರ್ಯಗ್ರಹಣವನ್ನು ಕುಟುಂಬ ಸಮೇತ ಎಲ್ಲರೂ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಸೂರ್ಯಗ್ರಹಣ ಸೇರಿದಂತೆ ಗ್ರಹಣಗಳನ್ನು ಮಕ್ಕಳು, ಹೆಣ್ಣುಮಕ್ಕಳು ವೀಕ್ಷಿಸಿದರೆ ಅಪಾಯ ಎಂಬ ಮೂಡನಂಬಿಕೆ ಇತ್ತು. ಅದನ್ನು ಕಡೆಗಾಣಿಸಿ ವೈಚಾರಿಕತೆ ಬೆಳೆಸುವುದು ಇದರ ಉದ್ದೇಶವಾಗಿದೆ ಎಂದು ಯುವ ವಿಜ್ಞಾನಿ ಮಂಜುನಾಥ್ ತಿಳಿಸಿದರು. ಇನ್ನು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸೂರ್ಯಗ್ರಹಣದ ಪ್ರಯುಕ್ತ ಪೂಜೆ, ಹೋಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಾಧ್ವ ಸರೋವರದಲ್ಲಿ ಸ್ನಾನ ಮಾಡಿದ ಶ್ರೀಗಳು ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇನ್ನೂ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಗ್ರಹಣದ ಸಮಯದಲ್ಲಿ ಅಂಗವಿಕಲರನ್ನು ಮಣ್ಣಿನಲ್ಲಿ ಹೂತರೆ ಅಂಗವಿಕಲತನ ಸರಿಹೋಗಲಿದೆ ಎಂಬ ಮೂಡನಂಬಿಕೆಯಿಂದ ಗುಲ್ಬರ್ಗದಲ್ಲಿ 3 ವರ್ಷದ ಮಕ್ಕಳಿಂದ ಹಿಡಿದು 30 ಹರೆಯ ಅಂಗವಿಕಲರನ್ನು ಮಣ್ಣಿನಲ್ಲಿ ಹೂತಿಟ್ಟ ಘಟನೆಯೂ ನಡೆದಿದೆ.
(ದಟ್ಸ್ ಕನ್ನಡ ವಾರ್ತೆ)