ಸಿಬಿಎಸ್ಸಿ ಶಾಲೆಗಳಿಗೆ ಮೂಗುದಾರ : ಕಾಗೇರಿ
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಡೆರಿಕ್ ಫುಲ್ಲಿನ್ ಫಾ ಅವರ ಪರವಾಗಿ ಶಾಸಕ ಸಿ ಟಿ ರವಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಕೇಂದ್ರ ಸರಕಾರ ಹೊಸ ಕಾಯ್ದೆಯನ್ನು ಜಾರಿಗೆ ತರುತ್ತಿದೆ. ರಾಜ್ಯದಲ್ಲೂ ಹೊಸ ಕಾಯ್ದೆ ತರಲು ಉದ್ದೇಶಿಸಲಾಗಿದೆ. ರಾಜ್ಯ ಸರಕಾರದ ನಿಯಂತ್ರಣವಿಲ್ಲದಿರುವ ಕಾರಣ ಸಿಬಿಎಸ್ ಸಿ ಮತ್ತು ಐಸಿಎಸ್ ಸಿ ಶಾಲೆಗಳು ಮೂರು ಬಾರಿ ಶುಲ್ಕ ಹೆಚ್ಚಳ ಮಾಡಿವೆ. ಪಾಲಕರನ್ನು ಶೋಷಣೆ ಮಾಡುತ್ತಿವೆ ಎಂಬ ಆರೋಪವಿದೆ. ಇಂತಹ ಶಾಲೆಗಳ ಸುಲಿಗೆ ಮಾಡುತ್ತಿರುವ ಬಗ್ಗೆ ಸರಕಾರಕ್ಕೆ ಅನೇಕ ದೂರುಗಳು ಬಂದಿವೆ ಎಂದು ಹೆಗ್ಡೆ ವಿವರಿಸಿದರು.
ಬಡ್ಡಿ ಮನ್ನಾ ಪರಿಶೀಲನೆ : ಸಚಿವ ವೆಂಕಟರಮಣಪ್ಪ
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ನೀಡಿರುವ ಸಾಲದ ಬಡ್ಡಿ ಮನ್ನಾ ಮಾಡುವ ಬಗ್ಗೆ ಸರಕಾರ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಸಣ್ಣ ಕೈಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವ ವೆಂಕಟರಮಣಪ್ಪ ವಿಧಾನ ಪರಿಷತ್ ನಲ್ಲಿ ತಿಳಿಸಿದರು. ಕಳೆದ 10 ವರ್ಷಗಳಿಂದ ಫಲಾನುಭವಿಗಳಿಂದ ಸಾಲದ ಬಾಬ್ತು 3,742 ಲಕ್ಷ ರುಪಾಯಿ ಮತ್ತು ಬಡ್ಡಿ ಬಾಬ್ತು 30,047 ಲಕ್ಷ ರುಪಾಯಿ ವಸೂಲಿ ಮಾಡಲಾಗಿದೆ ಎಂದರು.
ಖಾದಿ ಉತ್ಪನ್ನಗಳ ಮಾರಾಟವನ್ನು ಪ್ರೋತ್ಸಾಹಿಸಲು ರಾಜ್ಯದ ವಿವಿಧ ಭಾಗಗಳಲ್ಲಿ ಖಾದಿ ಉತ್ಪನ್ನಗಳ ಪ್ರದರ್ಶನ ನಡೆಸಿ ಉತ್ತೇಜನ ನೀಡಲಾಗುತ್ತಿದೆ. ಕೈಗಾರಿಕಾ ವಿಕಾಸ ಯೋಜನೆಯಡಿ 650 ಕಸಬುದಾರರಿಗೆ ಉದ್ಯೋಗವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಉದ್ಯೋಗ ಸೃಷ್ಟಿ ಯೋಜನೆಯಡಿ 4,943 ಘಟಕಗಳಿಗೆ 5487 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವೆಂಕಟರಮಣಪ್ಪ ಹೇಳಿದರು.
ಮಳೆ ಹಾನಿ ಪ್ರದೇಶಕ್ಕೆ ಹೆಚ್ಚುವರಿ ಹಣ
ಶಿವಮೊಗ್ಗ ಜಿಲ್ಲೆ ಸೇರಿ 11 ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆಯಿಂದ ಉಂಟಾಗಿರುವ ಹಾನಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದರು.
ಅತಿವೃಷ್ಟಿಗೆ ಸಂಬಂಧಿಸಿದಂತೆ ಮಲತಾಯಿ ಧೋರಣೆ ಅಥವಾ ನಿರ್ಲಕ್ಷ್ಯ ವಹಿಸಲು ಸಾಧ್ಯವಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಸಹಾಯ ನೀಡುವುದಾಗಿ ಅವರು ಭರವಸೆ ನೀಡಿದರು. ಹಾಸನ ಜಿಲ್ಲೆಯಲ್ಲೂ ಭಾರಿ ಮಳೆ ಬಿದ್ದ ಪರಿಣಾಮ ಸಾಕಷ್ಟು ಹಾನಿ ಉಂಟಾಗಿದೆ. ಪರಿಹಾರಕ್ಕಾಗಿ 4 ಕೋಟಿ ರುಪಾಯಿಗಳನ್ನು ಈಗಾಗಲೇ ಒದಗಿಸಲಾಗಿದೆ ಎಂದರು.
(ದಟ್ಸ್ ಕನ್ನಡ ವಾರ್ತೆ)