ವಿದುಷಿ ಗಂಗೂಬಾಯಿ ಹಾನಗಲ್ ವಿಧಿವಶ
ಹೆಮ್ಮಯ ಕಿರಾಣ ಘರಾಣಾದ ಗಂಗಜ್ಜಿ ಸಂಗೀತದಲ್ಲಿ ದೇಶಕಂಡ ಅತ್ಯದ್ಭುತ ಪ್ರತಿಭೆ. ಉತ್ತರ ಕರ್ನಾಟಕದ ಗಂಗಜ್ಜಿ ಕರ್ನಾಟಕದ ಜನತೆ ಹೆಮ್ಮೆಪಡುವಂತಹ ಸಾಧಕಿ. ಗಂಗೂಬಾಯಿ ಹಾನಗಲ್ ಎಂದರೆ ಸಂಗೀತ ಕ್ಷೇತ್ರ ರೋಮಾಂಚನಗೊಳ್ಳುವ ಸಾಧನೆ ಮಾಡಿದ್ದು, ದೇಶ ವಿದೇಶಗಳಲ್ಲಿ ಸಂಗೀತ ಕಛೇರಿಗಳನ್ನು ನೀಡಿ ಕರ್ನಾಟಕ ಮತ್ತು ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಗಜ್ಜಿ, ಇತ್ತೀಚೆಗೆ ಅವರ ಸ್ಥಿತಿ ತುಂಬಾ ಗಂಭೀರವಾಗಿತ್ತು. ಸೋಮವಾರ ರಾತ್ರಿ 9ರ ಸುಮಾರಿಗೆ ಏಕಾಏಕಿ ಆರೋಗ್ಯ ಹದಗೆಟ್ಟಿದ್ದರಿಂದ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಯಿತು. ತಜ್ಞ ವೈದ್ಯರ ತಂಡ ಗಂಗಜ್ಜಿಯ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದರು. ಚಿಕಿತ್ಸೆಗೆ ಅವರು ಸ್ಪಂದಿಸುತ್ತಿಲ್ಲ. ಬೆಳಗಿನವರೆಗೆ ನಾವು ಹೆಚ್ಚೇನನ್ನೂ ಹೇಳುವ ಸ್ಥಿತಿಯಲ್ಲಿ ಇಲ್ಲ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ ಟಂಕಸಾಲಿ ಮತ್ತು ಡಾ ಆನಂದ ಕೊಪ್ಪದ ತಿಳಿಸಿದ್ದರು. ವೈದ್ಯರು ಹೇಳಿದಂತೆ ಗಾನವಿದುಷಿಯ ಪ್ರಾಣ ಪಕ್ಷಿ ಇಂದು ಬೆಳಗ್ಗೆ 7.10ಕ್ಕೆ ಹಾರಿಹೋಗಿದೆ. ಗಂಗಜ್ಜಿಯ ನಿಧನದಿಂದ ಸಂಗೀತದ ಲೋಕ ಬಡವಾಗಿದ್ದು, ಅಪಾರ ಅಭಿಮಾನಿಗಳು ಕಂಬನಿ ಮಿಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)