ಸಿಪಿ ಯೋಗೀಶ್ವರ್ ಮನೆ ಮೇಲೆ ಐಟಿ ದಾಳಿ
ಮುಂಜಾನೆ 6.30ರ ಸಮಯದಲ್ಲಿ ಏಕಕಾಲದಲ್ಲಿ ಯೋಗೀಶ್ವರ್ ಅವರ ಕುವೆಂಪು ನಗರದ 5ನೇ ರಸ್ತೆಯ ಮನೆ ಮತ್ತು ಸ್ವಗ್ರಾಮ ಚಕ್ಕೆರೆಯ ನಿವಾಸ ಹಾಗೂ ಅವರ ಮಾಲಿಕತ್ವದ ಕರ್ಮಯೋಗಿ ಅಪರೇಲ್ಸ್ ಗಾರ್ಮೆಂಟ್ಸ್ ಮೇಲೆ ದಾಳಿ ನಡೆಸಲಾಗಿದೆ. ಯೋಗೀಶ್ವರ್ ಸಹೋದರ ಸಿ.ಪಿ. ರಾಜೇಶ್, ಮತ್ತೊಬ್ಬ ಸಹೋದರ ಗಂಗಾಧರ್ ಅವರ ಬೆಂಗಳೂರು ನಿವಾಸ ಹಾಗೂ ಸಹೋದರಿಯರು ಹಾಗೂ ಯೋಗೀಶ್ವರ್ ಭಾವಂದಿರ ಮನೆಗಳ ಮೇಲೂ ದಾಳಿ ಮಾಡಲಾಗಿದೆ.
ಅಲ್ಲದೆ, ಯೋಗೀಶ್ವರ್ ಅಪ್ತವಲಯದಲ್ಲಿ ಗುರುತಿಸಿಕೊಂಡಿರುವ ತಾಲೂಕ್ ಪಂಚಾಯತ್ ಸದಸ್ಯ ತಗಚಗೆರೆ ಶಿವಲಿಂಗಯ್ಯ, ಎಸ್.ಸಿ. ಶೇಖರ್, ರಾಜಪ್ಪ ಪಾರ್ಥ ಮುಂತಾದವರ ನಿವಾಸಗಳ ಮೇಲೆ ಸುಮಾರು 60 ಮಂದಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಕೇಂದ್ರೀಯ ತನಿಖಾ ತಂಡ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದ್ದು, ಅಧಿಕಾರಿಗಳು ಮಾಧ್ಯಮಗಳಿಗೆ ನಿಖರವಾದ ಮಾಹಿತಿ ನೀಡಲಿಲ್ಲ.
ಲೋಕಸಭಾ ಚುನಾವಣೆ ಮುಗಿದ ತರುವಯ ಮೆಗಾಸಿಟಿ ಹಗರಣದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ತನಿಖೆಗೆ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ವಿಧಾನಸಬೆ ಮರುಚುನಾವಣೆ ಹಿನ್ನೆಲೆಯಲ್ಲಿ ಯೋಗೀಶ್ವರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವುದು ಖಚಿತವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಯೋಗೀಶ್ವರ್ ತಮ್ಮ ನಿವಾಸ ಹಾಗೂ ಬೆಂಬಲಿಗ ಮುಖಂಡರ ಮನೆಗಳಲ್ಲಿ ಚುನಾವಣೆಯ ಖರ್ಚಿಗೆ ಹಣ ಸಂಗ್ರಹಿಸಿ ಇಟ್ಟಿರಬಹುದು ಎಂದು ಶಂಕೆಗೊಂಡಿರುವ ಕೇಂದ್ರಿಯ ತನಿಖಾ ತಂಡ ತಮ್ಮ ಜತೆ ಆದಾಯ ತೆರಿಗೆ ಅಧಿಕಾರಿಗಳನ್ನು ಕರೆತಂದು ದಾಳಿ ನಡೆಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೂಡ ಯೋಗೀಶ್ವರ್ ಅವರ ಆಪ್ತ ಬೆಂಬಲಿಗ ಲ್ಯಾಬ್ ದಿನೇಶ್ ಮನೆಯ ಮೇಲೆ ದಾಳಿ ಮಾಡಿ ಹಣ ವಸಪಡಿಸಿಕೊಳ್ಳಲಾಗಿತ್ತು. ಯೋಗೀಶ್ವರ್ ಮತ್ತವರ ಬೆಂಬಲಿಗರ ನಿವಾಸದ ಮೇಲೆ ಕೇಂದ್ರಿಯ ತನಿಖಾ ತಂಡ ದಾಳಿ ನಡೆಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಅಪಾರ ಜನಸ್ತೋಮ ಯೋಗೀಶ್ವರ್ ಅವರ 5ನೇ ಅಡ್ಡರಸ್ತೆಯ ನಿವಾಸದ ಬಳಿ ಜಮಾಯಿಸಿತ್ತು.