ಉಡುಪಿ, ಜು.20: ದಕ್ಷಿಣಕನ್ನಡ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಕಳೆದ ವಾರ ತಡೆಯಾಜ್ಞೆ ನೀಡಿದ್ದರಿಂದ ಆಗಸ್ಟ್ 1 ರಂದು ತಾನು ದಕ್ಷಿಣಕನ್ನಡ ಪ್ರವೇಶಿಸುವುದಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಇಲ್ಲಿಗೆ ಸಮೀಪದ ಬಾರ್ಕೂರಿನಲ್ಲಿ ಸೇನೆಗೆ ಹೊಸ ಸದಸ್ಯರ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಂಗಳೂರು ಪಬ್ ದಾಳಿಯ ನಂತರ ಮುತಾಲಿಕ್ ದಕ್ಷಿಣ ಕನ್ನಡ ಪ್ರವೇಶಿಸುವುದನ್ನು ಜಿಲ್ಲಾಡಳಿತ ನಿರ್ಬಂಧಿಸಿತ್ತು. ಈ ಸಂಬಂಧ ಹೈಕೋರ್ಟ್ ನೀಡಿದ ತೀರ್ಪಿನ ವಿಸ್ಮೃತ ವರದಿಗಾಗಿ ಅರ್ಜಿ ಹಾಕಿದ್ದೇನೆ. ಅನಂತರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪೊನ್ನುರಾಜ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು. ಮೈಸೂರು ಗಲಭೆಯಲ್ಲಿ ಸೇನೆಯ ಯಾವ ಕೈವಾಡವೂ ಇಲ್ಲ ಎಂದು ಮುತಾಲಿಕ್ ಸ್ಪಷ್ಟ ಪಡಿಸಿದ್ದಾರೆ.
ಸೇನೆ ವಿರೋಧ ವ್ಯಕ್ತ ಪಡಿಸಿದ್ದಕ್ಕಾಗಿ ಪ್ರೇಮಿಗಳ ದಿನಾಚರಣೆಯಂದು, ಇದನ್ನು ಬೆಂಬಲಿಸುವವರು ಸುಮಾರು 3000 ಸಾವಿರ ಪಿಂಕ್ ಚಡ್ಡಿ ನಮ್ಮ ಬೆಳಗಾವಿ ಕಚೇರಿಗೆ ಕಳುಹಿಸಿದ್ದಾರೆ. ಅದನ್ನು ಹರಾಜು ಹಾಕಿ ಅದರಲ್ಲಿ ಬಂದ ಮೂರು ಸಾವಿರ ರೂಪಾಯಿಗಳನ್ನು ಬೆಳಗಾವಿ ವಿವೇಕಾನಂದ ಬಾಲಾಶ್ರಮಕ್ಕೆ ನೀಡಲಾಗಿದೆ. ಸೇನೆ ತನ್ನ ಕಛೇರಿಯನ್ನು ತಮಿಳುನಾಡು, ಮಧ್ಯಪ್ರದೇಶ, ಗೋವಾ ಮತ್ತು ಆಂಧ್ರ ಪ್ರದೇಶದಲ್ಲಿ ತೆರೆದಿದೆ ಎಂದು ಮುತಾಲಿಕ್ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Please read our comments policy before posting