ಶ್ರೀರಾಮುಲು ಜ್ವರ ಬಿಡಿಸಿದ ಸಿದ್ದು
ಬೆಂಗಳೂರು, ಜು. 17 : ಅರೋಗ್ಯ ಸಚಿವ ಶ್ರೀರಾಮುಲು ಅವರನ್ನು ವಿಧಾನಸಭೆ ಮೊಗಸಾಲೆಯಲ್ಲೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡು ಬೆವರಿಳಿಸಿದ ಘಟನೆ ನಡೆದಿದೆ. ಪ್ರತಿಪಕ್ಷದ ಮೊಗಸಾಲೆಯಲ್ಲಿ ತಮ್ಮ ಶಾಸಕರೊಂದಿಗೆ ಮಾತುಕತೆ ನಡೆಸುತ್ತಿದ್ದಾಗ, ಸಚಿವ ಶ್ರೀರಾಮುಲು ಮುಖ್ಯಮಂತ್ರಿಗಳ ಕೊಠಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸಚಿವರನ್ನು ಕರೆಸಿ ಸುಮಾರು ಹತ್ತು ನಿಮಿಷಗಳ ಕಾಲ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯಾದ್ಯಂತ ಡೆಂಗ್ಯೂ, ಚಿಕೂನ್ ಗುನ್ಯಾ ರೋಗ ಬಂದಿರುವುದು ನಿಮಗೆ ತಿಳಿದಿದೆಯಾ? ಡೆಂಗೆ ಜ್ವರ ತುಂಬಾ ಅಪಾಯಕಾರಿ ಮಂಡ್ಯದಲ್ಲಿ ಒಂದೇ ಮನೆಯಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ. ಈ ವಿಷಯ ನಿಮಗೆ ತಿಳಿದಿದೆಯಾ ? ಇಂತಹ ಕಾಯಿಲೆ ಬಂದರೆ ದುಬಾರಿ ಚುಚ್ಚುಮದ್ದು ತೆಗೆದುಕೊಳ್ಳಬೇಕು. ಬಡವರ ಬಳಿ ಅಷ್ಟೊಂದು ದುಡ್ಡು ಎಲ್ಲಿರಬೇಕು? ಸರಕಾರಿ ಆಸ್ಪತ್ರೆಗಳ ಮೂಲಕ ನೀವು ಈ ಕೆಲಸ ಮಾಡಿಸಬೇಕು. ನಿಮ್ಮ ಸಚಿವಾಲಯದ ಅಧಿಕಾರಿಗಳು ನಿಮಗೆ ಈ ವಿಷಯವನ್ನೆಲ್ಲಾ ನಿಮಗೆ ತಿಳಿಸಲ್ವಾ? ಏನು ಕೆಲಸ ಮಾಡುತ್ತಾರೆ ಅವರು? ಎಂದು ತರಾಟೆಗೆ ತೆಗೆದೊಕೊಂಡರು. ಸಿದ್ದು ಅವರ ಪ್ರಶ್ನೆಗೆ ಉತ್ತರವಿಲ್ಲದೆ ಸಚಿವ ಶ್ರೀರಾಮುಲು ಪೆಚ್ಚುಪೆಚ್ಚಾಗಿ ಉತ್ತರಿಸಿ ಬೆವರು ಒರೆಸಿಕೊಂಡು ಅಲ್ಲಿಂದ ನಿರ್ಗಮಿಸಿದರು ಎಂದು ವರದಿಯಾಗಿದೆ.
(ದಟ್ಸ್ ಕನ್ನಡ ವಾರ್ತೆ)