ತಲಕಾಡು ಪಂಚಲಿಂಗ ದರ್ಶನಕ್ಕೆ ವ್ಯಾಪಕ ಸಿದ್ದತೆ
ಬೆಂಗಳೂರು, ಜುಲೈ 16 : ತಲಕಾಡು ಕ್ಷೇತ್ರದಲ್ಲಿ ನಡೆಯುವ ಪಂಚಲಿಂಗ ದರ್ಶನ ಮಹೋತ್ಸವು ಈ ಸಾರಿ ಮೂರು ವರ್ಷಗಳ ನಂತರ ಆಚರಿಸುವ ಸಂದರ್ಭ ಒದಗಿ ಬಂದಿದ್ದು, ಅದಕ್ಕೆ ವಿಶೇಷ ಮಹತ್ವವಿದೆ. ಈ ಬಾರಿಯ ಪಂಚಲಿಂಗ ದರ್ಶನವನ್ನು 2009ರ ನವೆಂಬರ್ 16ರಂದು ಹೆಚ್ಚು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕು.ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಸಚಿವರು ದೇವಸ್ಥಾನಗಳ ದುರಸ್ಥಿ ಕಾರ್ಯ, ಮೂಲಭೂತ ಸೌಲಭ್ಯ ಕಲ್ಪಿಸುವುದು ಹಾಗೂ ದೇವಸ್ಥಾನಗಳನ್ನು ಅಲಂಕರಿಸುವ ಕಡೆ ಹೆಚ್ಚಿನ ಗಮನಹರಿಸುವುದರ ಜೊತೆಗೆ ದರ್ಶನಕ್ಕಾಗಿ ಆಗಮಿಸುವ ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದರು.
ದೇವಸ್ಥಾನಕ್ಕೆ ಹೋಗುವ ರಸ್ತೆಗಳ ಅಭಿವೃದ್ಧಿ, ಸ್ನಾನ ಮಾಡುವ ಸ್ಥಳಗಳಲ್ಲಿ ಬ್ಯಾರಿಕೇಡ್ ಅಥವಾ ಸರಪಳಿ ಅಳವಡಿಸುವುದು. ತಾತ್ಕಾಲಿಕ ಹಾಗೂ ಖಾಯಂ ಶೌಚಾಲಯಗಳನ್ನು ನಿರ್ಮಿಸುವುದು ಯಾತ್ರಾರ್ಥಿಗಳು ಉಳಿದುಕೊಳ್ಳಲು ಅನುಕೂಲವಾಗುವಂತೆ ವಸತಿ ಗೃಹ ನಿರ್ಮಾಣ ಹಾಗೂ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಔಟ್ಪೋಸ್ಟ್ ತೆರೆಯುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ಯಾತ್ರಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರಿಗೆ ವ್ಯವಸ್ಥೆ, ಪಂಚಲಿಂಗ ದರ್ಶನ ಕುರಿತು ಮಾಹಿತಿ ನೀಡಲು ಮೈಸೂರಿನಲ್ಲಿ 4 ಮಾಹಿತಿ ಕೇಂದ್ರಗಳನ್ನು ಹಾಗೂ ಬೆಂಗಳೂರಿನಲ್ಲಿ ಒಂದು ಮಾಹಿತಿ ಕೇಂದ್ರ ಪ್ರಾರಂಭಿಸುವಂತೆ ಸೂಚನೆ ನೀಡಿದ್ದಾರೆ.
ತಲಕಾಡಿನಲ್ಲಿ ಕಳೆದ ಸಾರಿ ನಡೆದ ಪಂಚಲಿಂಗ ದರ್ಶನಕ್ಕೆ ಸರ್ಕಾರ 21 ಕೋಟಿ ರೂ ಹಣ ಒದಗಿಸಿತ್ತು ಎಂದ ಸಚಿವರು ಈ ಸಾರಿ ಹಲವು ಇಲಾಖೆಗಳು ತಮಗೆ ಸಂಬಂಧಿಸಿದ ಕಾಮಗಾರಿಗಳನ್ನು ಮಾಡಲು ಮುಂದೆ ಬರಬೇಕು ಎಂದರು. ಇದೇ ಸಂದರ್ಭದಲ್ಲಿ ನಮ್ಮ ಮೂಲ ಸಂಸ್ಕೃತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ 5 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಹಾಗೂ ಪಂಚಲಿಂಗ ದರ್ಶನದ ಬಗ್ಗೆ ರಾಜ್ಯಾದ್ಯಂತ ಹೆಚ್ಚು ಪ್ರಚಾರ ಮಾಡಲಾಗುವುದು ಎಂದು ಹೇಳಿದ ಸಚಿವರು ದರ್ಶನ ಸಂದರ್ಭದಲ್ಲಿ ನಡೆಯುವ ನೂಕುನುಗ್ಗಲು ಹಾಗೂ ಅನವಶ್ಯಕ ಗೊಂದಲಗಳಿಗೆ ಎಡೆಮಾಡಿಕೊಡದಂತೆ ಪೊಲೀಸ್ ಇಲಾಖಾ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು.
ಟಿ. ನರಸೀಪುರದಲ್ಲಿ ಕಪಿಲಾ ನದಿಗೆ ಹೊಂದಿಕೊಂಡಿರುವ ಸೇತುವೆಯು ಶಿಥಿಲಗೊಂಡಿದ್ದು, ದುರಸ್ಥಿ ಕಾರ್ಯ ಪೂರ್ಣಗೊಳ್ಳುವವರೆಗೆ ಭಾರಿ ವಾಹನಗಳು ಹೆಚ್ಚಿನ ಸರಕು ಸಾಗಣೆ ಮಾಡದಂತೆ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಜಂಟಿಯಾಗಿ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ ಸಚಿವರು ಲೋಕೋಪಯೋಗಿ ಇಲಾಖೆಯು ಆ ಸ್ಥಳದಲ್ಲಿ ತೂಕ ಅಳತೆ ಮಾಡುವ ಯಂತ್ರ ಅಳವಡಿಸಬೇಕು ಎಂದು ಸೂಚಿಸಿದರು.
ಪಂಚಲಿಂಗ ದರ್ಶನ ನಡೆಯುವ ದೇವಸ್ಥಾನಗಳ ನಡುವೆ ಬರುವ ರಸ್ತೆಗಳನ್ನು ಶುದ್ಧಿಗೊಳಿಸಬೇಕು ಎಂದ ಸಚಿವರು ಒಟ್ಟಾರೆ ಈ ಬಾರಿಯ ಪಂಚಲಿಂಗ ದರ್ಶನ ಮಹೋತ್ಸವವು ಯಶಸ್ವಿಯಾಗುವಂತೆ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ವಿಶೇಷ ಕಾಳಜಿವಹಿಸಿ ಕೆಲಸಮಾಡಬೇಕು ಎಂದರು.
ಮೈಸೂರಿನ ಪ್ರಾದೇಶಿಕ ಆಯುಕ್ತರಾದ ಜಯಂತಿ, ಜಿಲ್ಲಾಧಿಕಾರಿಗಳಾದ ಮಣಿವಣ್ಣನ್, ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾಯಾದರ್ಶಿಗಳಾದ ಅಗವಾನೆ ಅವರು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಜ್ಯೋತಿರಾಮಲಿಂಗಂ ಅವರು ಮಂಡ್ಯ ಹಾಗೂ ಚಾಮರಾಜ ನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮುಜರಾಯಿ ಇಲಾಖಾ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇತರೆ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)