ನಮ್ಮ ವೃತ್ತಿಯೇ ವ್ಯಾಪಾರ : ಕೃಷ್ಣಯ್ಯ ಶೆಟ್ಟಿ
ಬೆಂಗಳೂರು, ಜು. 16 : ಸ್ವಾಮಿ ನಾವು ಆರ್ಯ ವೈಶ್ಯರು. ನಮ್ಮ ವೃತ್ತಿಯೇ ವ್ಯಾಪಾರ. ಅದನ್ನೇ ಮಾಡಿದ್ದೇನೆ ತಪ್ಪೇನಿದೆ. ಕರ್ನಾಟಕ ಗೃಹ ಮಂಡಳಿಯ ಅವ್ಯವಹಾರದ ಪ್ರಮುಖ ರೂವಾರಿ ಎಂದು ಬಿಂಬಸಲಾಗುತ್ತಿರುವ ಮಾಜಿ ಸಚಿವ ಎನ್ ಎಸ್ ಕೃಷ್ಣಯ್ಯ ಶೆಟ್ಟಿ ಅವರು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ ಇದೆ.
ಹಿಂದಿನಿಂದಲೂ ನಮ್ಮ ಕುಟುಂಬ ರಿಯಲ್ ಎಸ್ಟೇಟ್ ವ್ಯವಹಾರ ತೊಡಗಿದೆ. ವ್ಯಾಪಾರವೇ ನಮ್ಮ ಬದುಕು. ಈ ಪ್ರಕರಣದಲ್ಲೂ ಅಷ್ಟೇ. ರೈತರಿಂದ ಖರೀದಿಸಿದ್ದ ಭೂಮಿಯನ್ನು ಗೃಹ ಮಂಡಳಿಗೆ ಮಾರಾಟ ಮಾಡಲಾಗಿದೆ. ಇದರಲ್ಲಿ ಏನು ತಪ್ಪಿದೆಯೋ ಗೊತ್ತಾಗುತ್ತಿಲ್ಲ. ಲಾಭಕ್ಕಲ್ಲದೆ, ನಷ್ಟಕ್ಕೆ ಮಾರಿಕೊಳ್ಳಲು ನಮಗೆ ತಲೆ ಕೆಟ್ಟಿಲ್ಲ. ಅನೇಕ ಪ್ರಕರಣಗಳಲ್ಲಿ ಚದರ ಅಡಿಗೆ 750 ರುಪಾಯಿಗಳಂತೆ ಮಾರಾಟ ಮಾಡಿದ್ದಾರೆ. ಖರೀದಿಸಿರುವ ನಿದರ್ಶನಗಳಿವೆ. ನಾವು 450 ರುಪಾಯಿಗೆ ಮಾರಿದ್ದೇವೆ. ಅದನ್ನೇ ತಪ್ಪು ಎಂದರೆ ಏನು ಹೇಳಲು ಆಗುವುದಿಲ್ಲ ಎಂದರು.
ವಸತಿ ಸಚಿವರಾಗಿದ್ದುಕೊಂಡು ಗೃಹ ಮಂಡಳಿಗೆ ನಿಮ್ಮ ಸಹೋದರನ ಭೂಮಿ ಖರೀದಿಸುವುದು ತಪ್ಪಲ್ಲವೇ ಎಂಬ ಪ್ರಶ್ನೆಗೆ ಅಯ್ಯೋ, ಮಂಡಳಿ ಅಧ್ಯಕ್ಷ ಜಿ ಟಿ ದೇವೇಗೌಡರು ನಿಮ್ಮ ಜಮೀನು ಇದೆಯಲ್ಲ ಅದನ್ನೇ ಕೊಟ್ಟುಬಿಡಿ. ಹೇಗಿದ್ದರೂ ನೀವು ವ್ಯಾಪಾರ ಮಾಡುತ್ತೀರಿ ಎಂದರು. ಸರಿ ಎಂದು ಒಪ್ಪಿದೆ ಎಂದು ಕೃಷ್ಣಯ್ಯ ಶೆಟ್ಟಿ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)