ಮುಂಬೈ ಮೇಲೆ ಮತ್ತೊಂದು ಭಾರಿ ದಾಳಿ?
ಮುಂಬೈನ ನಾವಿ ಮುಂಬೈನ ರೈಲ್ವೆ ನಿಲ್ದಾಣ, ಪ್ರತಿಷ್ಠಿತ ಬ್ಯಾಂಕ್ ಗಳು, ಪ್ರಮುಖ ಸರಕಾರಿ ಕಚೇರಿಗಳು ಸೇರಿದಂತೆ ಮಹಾರಾಷ್ಟ್ರದ ಏಳು ಕಡೆಗಳಲ್ಲಿ ದುಷ್ಕತ್ಯ ಎಸಗಲು ಉಗ್ರರು ವ್ಯವಸ್ಥಿತ ತಯಾರಿ ನಡೆಸಿದ್ದಾರೆ. ಕಳೆದ ವರ್ಷ ನವೆಂಬರ್ 26 ರಂದು ನಡೆದ ಮುಂಬೈ ಭಯೋತ್ಪಾದನೆಯ ಮಾದರಿಯಲ್ಲೇ ಇನ್ನೊಂದು ದಾಳಿ ನಡೆಸಲು ಉಗ್ರರು ಸಜ್ಜಾಗಿದ್ದಾರೆ. ಅಂದು ಸಮುದ್ರ ಮೂಲಕ ಭಾರತದೊಳಗೆ ನುಸುಳಿದ ಉಗ್ರರು ಇಂದು ಅದೇ ಮಾರ್ಗ ಅನುಸರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಮುದ್ರದ ಬಂದರುಗಳ ಮೇಲೆ ಬಾರಿ ಕಟ್ಟೆಚ್ಚರ ನಿಯೋಜಿಸಲಾಗಿದೆ ಎಂದು ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ಹೇಳಿದರು.
ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಬಂಧಿತವಾಗಿರುವ ಲಷ್ಕರ್ ಇ ತೊಯ್ಬಾ ಸಂಘಟನೆ ಉಗ್ರನ ಬಳಿ ಮಹಾರಾಷ್ಟ್ರದ ಏಳು ಪ್ರಮುಖ ಸ್ಥಳಗಳ ಬಾವಚಿತ್ರಗಳು ಸಿಕ್ಕಿವೆ. ಇಂದು ಕೇಂದ್ರ ಗುಪ್ತಚರ ಇಲಾಖೆ ಕೂಡಾ ಅದೇ ಮಾತನ್ನು ಹೇಳಿದ್ದು, ದಾಳಿಯ ಸಂಚು ಮತ್ತಷ್ಟು ದಟ್ಟವಾಗಿದೆ. ಅಲ್ಲದೇ ಯಾವ ದಿನಾಂಕದಂದು ಸ್ಫೋಟ ನಡೆಸಬೇಕು ಎಂಬುದನ್ನು ಕೂಡಾ ಉಗ್ರರು ನಿಗದಿಪಡಿಸಿರುವ ಅಂಶವನ್ನು ಅಧಿಕಾರಿಗಳು ಬಹಿರಂಗಗೊಳಿಸಿದ್ದಾರೆ. ಆದರೆ, ಲಷ್ಕರ್ ಉಗ್ರರಿಗೆ ಸ್ಥಳೀಯ ಸಹಕಾರದ ಬಗ್ಗೆ ಯಾವುದೇ ದೊರೆತಿಲ್ಲ ಎಂದು ಚಿದಂಬರಂ ಹೇಳಿದರು.
(ಏಜನ್ಸೀಸ್)