ಗಣಿ ವರದಿ ಸತ್ತ ಕುದುರೆ : ಸಂತೋಷ ಹೆಗ್ಡೆ
ಗಣಿ ವರದಿ ಮೇಲೆ ಸರಕಾರ ತೆಗೆದುಕೊಂಡ ಕ್ರಮದ ಕುರಿತು ನೀಡಿದ ವರದಿ ಪ್ರಮುಖ ಅಂಶ ಬಹಿರಂಗಗೊಳಿಸಿದ ಅವರು, ಸತ್ತ ಕುದುರೆಗೆ ಹೊಡೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಏನು ನಡೆಯುತ್ತಿದೆ ಎಂಬುದು ನನ್ನ ಕಳಕಳಿ. ಅದಾಗಿಯೂ ಈ ಎಲ್ಲ ಅಂಶಗಳ ಕುರಿತು ನಾನು ಸರಕಾರಕ್ಕೆ ಅಂತಿಮ ಪತ್ರ ಬರೆಯುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಐದು ತಿಂಗಳಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಸರಕಾರ ಏನು ಮಾಡಿದೆ ಎಂಬುದು ವರದಿಯಲ್ಲಿ ಇಲ್ಲ. ಏನು ಮಾಡಬಹುದು ಎಂಬ ಉಲ್ಲೇಖವಷ್ಟೇ ಇದೆ. ಮಲ್ನೋಟಕ್ಕೆ ಕ್ರಮ ತೆಗೆದುಕೊಂಡಂತೆ ಕಂಡರೂ ನನಗೆ ವೈಯಕ್ತಿಕ ಸಮಾಧಾನ ತಂದಿಲ್ಲ ಎಂದು ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ, ಮೈಸೂರು ಮಿನರಲ್ಸ್ ಹಗರಣ, ಕರ್ನಾಟಕ ಆಂಧ್ರ ಗಡಿ ಸಮಸ್ಯೆ ಹಾಗೂ ಗಣಿಗಾರಿಕೆ ಅರಣ್ಯಭೂಮಿ ಒತ್ತುವರಿ, ಗಣಿಗಾರಿಕೆ ಉಪಗುತ್ತಿಗೆ, ಪರಿಸರದ ಮೇಲಾಗುವ ನಿರ್ದಿಷ್ಟ ಪರಿಣಾಮ ಕ್ರಮ ಕೈಗೊಂಡಿಲ್ಲ. ಒಟ್ಟಾರೆಯಾಗಿ ಈ ಕತೆಯ ನೀತಿ ಏನು ? ಎಂದು ಪ್ರಶ್ನಿಸಿದರೆ, ನನ್ನ ದೃಷ್ಟಿಯಲ್ಲಿ ಕೆಲವು ಕತೆಗೆ ನೀತಿ ಇರುವುದಿಲ್ಲ. ಎಲ್ಲ ಕತೆಗೂ ನೀತಿ ಇರಬೇಕೆಂಬ ನಿಯಮವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಧರಂಸಿಂಗ್ ಪ್ರಕರಣ ಮುಗಿದ ಅಧ್ಯಾಯ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)