ಧರಂಸಿಂಗ್ ಹೆಸರು ಕೈಬಿಡಲು ಠಾಕೂರ್ ಸೂಚನೆ
ಮೂಲಗಳ ಪ್ರಕಾರ, ಧರಂಸಿಂಗ್ ಸೇರಿದಂತೆ ಲೋಕಾಯುಕ್ತರು ಶಿಫಾರಸ್ಸು ಮಾಡಿದ ಎಲ್ಲರ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ಸಿದ್ದ ಎಂದು ಸರಕಾರ ಭರವಸೆ ನೀಡಿದೆ. ರಾಮೇಶ್ವರ ಠಾಕೂರ್ ತಾವು ಕರ್ನಾಟಕ ರಾಜ್ಯಪಾಲ ಹುದ್ದೆಯಿಂದ ವರ್ಗವಾಗಿ ಹೋಗಲು ಕೆಲವೇ ದಿನ ಬಾಕಿ ಇರುವಾಗ ಸಿದ್ಧಪಡಿಸಿದ ಪತ್ರದಲ್ಲಿ ಧರಂಸಿಂಗ್ ಅವರನ್ನು ವರದಿಯಿಂದ ಕೈಬಿಡುವಂತೆ ಹೇಳಿದ್ದಾರೆ. ತಮ್ಮ ವಿವೇಚನಾಧಿಕಾರ ಬಳಸಿ ರಾಜ್ಯಪಾಲರು ಈ ಸೂಚನೆ ನೀಡಿದ್ದಾರೆ.
ಜೂನ್ 23 ರಂದೇ ಬರೆದ ಈ ಪತ್ರ ಜುಲೈ 6 ಅಥವಾ 7 ರಂದು ಲೋಕಾಯುಕ್ತ ಕಚೇರಿ ತಲುಪಿದೆ. ಎಚ್ ಆರ್ ಭಾರದ್ವಾಜ್ ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿನ ಗಡಿಬಿಡಿಯಲ್ಲಿ ರಾಜ್ಯಪಾಲರ ಕಾರ್ಯದರ್ಶಿ ಕಚೇರಿಯಿಂದ ಈ ಪತ್ರ ತಲುಪಲು ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.
ಧರಂಸಿಂಗ್ ಅವರನ್ನು ಕೈಬಿಡುವಂತೆ ರಾಜಭವನದಿಂದ ಪತ್ರ ಬಂದಿದೆ ಎಂಬುದನ್ನು ಒಪ್ಪಿಕೊಂಡಿರುವ ಲೋಕಾಯುಕ್ತ ಎನ್ ಸಂತೋಷ ಹೆಗ್ಡೆ, ಇದೊಂದು ಸೂಕ್ಷ್ಮ ವಿಚಾರ. ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ರಾಜ್ಯಪಾಲರಿಗೆ ಮಾತ್ರವಿದೆ. ಈ ಕಚೇರಿಯಿಂದಲೇ ಧರಂಸಿಂಗ್ ಅವರನ್ನು ಕೈಬಿಡುವಂತೆ ಸೂಚನೆಯಾಗಿದೆ. ಇದಕ್ಕಿಂತ ಹೆಚ್ಚೇನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ರಾಜ್ಯಪಾಲರು ಲೋಕಾಯುಕ್ತರಿಗೆ ಕಳುಹಿಸಿದ ಪತ್ರದಲ್ಲಿ ಕಾನ್ಫಡೆನ್ಸಿಯಲ್, ಸಿಕ್ರೇಟ್ ಅಂಡ್ ಸೀಲ್ಡ್ ಎಂದು ನಮೂದಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)