ಮೈಸೂರು : ಕಟ್ಟೆಚ್ಚರ ನಿಷೇಧಾಜ್ಞೆ ವಿಸ್ತರಣೆ
ಮೈಸೂರು, ಜು. 13 : ಗಲಭೆ ಪೀಡಿತ ಮೈಸೂರಿನ ಪರಿಸ್ಥಿತಿ ಹತೋಟಿ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆಯನ್ನು ಮಂಗಳವಾರ ರಾತ್ರಿಯವರೆಗೂ ಮುಂದುವರೆಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಅಗರವಾಲ್, ಮೈಸೂರಿನಲ್ಲಿ ಶಾಂತ ವಾತಾವರಣ ನಿರ್ಮಾಣವಾಗುತ್ತಿದೆ. ಆದರೆ, ಕೆಲ ಕಿಡಿಗೇಡಿಗಳು ಶಾಂತಿಗೆ ಭಂಗ ತರಲು ಯತ್ನಿಸುತ್ತಿವೆ. ಅಲ್ಲದೇ ನಗರದಲ್ಲಿ ಮತ್ತೆ ಗಲಭೆ ಏಬ್ಬಿಸಲು ಘಟನೆ ವಿರೋಧಿಸಿ ಕೆಲವರು ಪ್ರತಿಭಟನೆ ಹಮ್ಮಿಕೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಮಂಗಳವಾರ ರಾತ್ರಿಯವರೆಗೂ ವಿಸ್ತರಿಸಲಾಗಿದೆ ಎಂದು ಹೇಳಿದರು.
ಅಲ್ಲದೇ ನಗರಕ್ಕೆ ಬರುವ ಎಲ್ಲ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಅನುಮಾನ ಬಂದವರನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ 200 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗಿದೆ ಎಂದು ಸುನೀಲ್ ಅಗರ್ ವಾಲ್ ತಿಳಿಸಿದರು. ಜುಲ 8 ರಿಂದ ನಡೆಯುತ್ತಿರುವ ಗಲಭೆಯಲ್ಲಿ 3 ಮಂದಿ ಮೃತಪಟ್ಟು, 18 ಮಂದಿ ಗಾಯಗೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)