ಮುಂಬೈ : ಸಾಧ್ವಿ ಪ್ರಗ್ಯಾಸಿಂಗ್ ಆತ್ಮಹತ್ಯೆ ಬೆದರಿಕೆ
ಮುಂಬೈ ಎಟಿಎಸ್ ಪೊಲೀಸರು ನನಗೆ ಅನಗತ್ಯವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. ತೀವ್ರ ನೊಂದಿರುವ ನಾನು ಆತ್ಮಹತ್ಯೆಯ ಕಠಿಣ ನಿರ್ಧಾರವನ್ನು ಕೈಗೊಳ್ಳಬಹುದು ಎಂದು ಅವರು ಬೆದರಿಕೆ ಹಾಕಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಸಾಧ್ವಿಯನ್ನು ನಗರದ ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ನನ್ನ ಕಕ್ಷಿದಾರರನ್ನು ನಡೆಸಿಕೊಂಡ ರೀತಿ ತುಂಬ ಕೆಟ್ಟದಾಗಿತ್ತು.
ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನನ್ನು ವಿಐಪಿ ರೀತಿಯಲ್ಲಿ ಕರೆದೊಯ್ಯಲಾಗುತ್ತಿದೆ. ಆದರೆ, ನನ್ನ ಕಕ್ಷಿದಾರರ ಜೊತೆಗೆ ತುಂಬ ಕೆಟ್ಟದಾಗಿ ನಡೆದುಕೊಳ್ಳುವುದು ಏಕೆ ಎಂದು ಸಾಧ್ವಿ ಪರ ವಕೀಲ ನವೀನ್ ಕೋಮಲ್ ಪ್ರಶ್ನಿಸಿದ್ದಾರೆ.
ಪೊಲೀಸ್ ಹಿಂಸೆಗೆ ಸಂಬಂಧಿಸಿದಂತೆ ಸಾಧ್ವಿ ಈಗಾಗಲೇ ಮೋಕಾ ನ್ಯಾಯಾಲಯಕ್ಕೆ ಎರಡು ಅರ್ಜಿಯನ್ನು ಸಲ್ಲಿಸಿದ್ದಾರೆ. ಅಲ್ಲದೇ ಮಾಲೇಗಾಂವ್ ಸ್ಫೋಟದಲ್ಲಿ ಮಹಾರಾಷ್ಟ್ರ ಪೊಲೀಸ್ ಅನಗತ್ಯವಾಗಿ ನನ್ನ ಮೇಲೆ ಪ್ರಕರಣ ದಾಖಲಿಸಿ ಮೋಕಾ ಕಾಯ್ದೆಯಡಿ ಬಂಧಿಸಿದ್ದಾರೆ ಎಂದು ಸ್ವತಃ ಸಾಧ್ವಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇತ್ತೀಚೆಗೆ ಜಾಮೀನಿಗಾಗಿ ಸಾಧ್ವಿ ಸಲ್ಲಿಸಿದ್ದ ಅರ್ಜಿಯನ್ನು ಮೋಕಾ ನ್ಯಾಯಾಲಯ ತಿರಸ್ಕರಿಸಿತ್ತು.
(ಏಜನ್ಸೀಸ್)