ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಬಿ ತುಳುಕುತ್ತಿರುವ ತುಂಗಾ ನದಿಗೆ ಈಶ್ವರಪ್ಪ ಬಾಗಿನ

By * ಶಿ.ಜು.ಪಾಶ, ಶಿವಮೊಗ್ಗ
|
Google Oneindia Kannada News

Eshwarappa offers to baagina to Tunga river
ಶಿವಮೊಗ್ಗ, ಜು. 11 : ರಾಜ್ಯದ ಕೈಗಾರಿಕೆಗಳಿಗೆ ನಿರಂತರ 24 ಗಂಟೆ ವಿದ್ಯುತ್ ಒದಗಿಸುವ ಕುರಿತು ಚರ್ಚೆ ಹಾಗೂ ಶೇ.20ರಷ್ಟು ವಿದ್ಯುತ್ ದರ ಏರಿಕೆಯಾಗುವ ಸಂಭವವಿದೆ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಶನಿವಾರ ಗಾಜನೂರು ಜಲಾಶಯ ಭರ್ತಿ ಮಾಡಿರುವ ತುಂಗಾ ನದಿಗೆ ಬಾಗಿನ ಅರ್ಪಿಸಿದ ನಂತರ ಹೇಳಿದರು.

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಜೊತೆಗೆ ಚರ್ಚೆ ನಡೆಸಿದ್ದು, ರಾಜ್ಯದ ಕೈಗಾರಿಕೆಗಳಿಗೆ ಹಗಲು-ರಾತ್ರಿ ವಿದ್ಯುತ್ ಒದಗಿಸಲು ಚರ್ಚೆ ನಡೆಯುತ್ತಿದೆ. ಕೈಗಾರಿಕೆಗಳಲ್ಲಿ ರಾತ್ರಿ ಪಾಳಿ ಕೆಲಸ ನಡೆದರೆ ಅನುಕೂಲವಾಗುತ್ತದೆ. ಈ ವಾರದಲ್ಲಿ ವಿದ್ಯುತ್ ಇಲಾಖೆ, ಕೈಗಾರಿಕಾ ಇಲಾಖೆ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ, ನಂತರ ತೀರ್ಮಾನಿಸುವುದಾಗಿ ತಿಳಿಸಿದರು.

ಕಳೆದ ಆರು ವರ್ಷಗಳಿಂದ ವಿದ್ಯುತ್ ದರದಲ್ಲಿ ಹೆಚ್ಚಳವಾಗಿಲ್ಲ. ಹೀಗಾಗಿ ವಿದ್ಯುತ್ ದರ ಏರಿಕೆಯಾಗುವ ಸಂಭವವಿದ್ದು, ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆದು ಶೇ.20ರಷ್ಟು ಬೆಲೆ ಏರಿಸುವಂತೆ ಕೆ.ಇ.ಆರ್.ಸಿ.ಗೆ ಮನವಿ ಸಲ್ಲಿಸಲಾಗುವುದು. ರಾಜ್ಯದಲ್ಲಿ 8 ದಿನಗಳ ಹಿಂದೆ ಬರಗಾಲದ ಛಾಯೆ ಇತ್ತು. ರಾಜ್ಯದ ಜನರ ಆಶೀರ್ವಾದ ಹಾಗೂ ದೇವರ ಕೃಪೆಯಿಂದ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಇದರಿಂದಾಗಿ ರೈತರಿಗೂ ಅನುಕೂಲವಾಗಿದೆ. ವಿಶೇಷವಾಗಿ ಲಿಂಗನಮಕ್ಕಿ ಜಲಾಶಯ 1771 ಅಡಿ ತುಂಬಿದ್ದು, ಕಳೆದ ಹತ್ತು ದಿನಗಳಲ್ಲಿ ಶೇ.28ರಷ್ಟು ತುಂಬಿದೆ ಮತ್ತು ಕಳೆದ ವರ್ಷಕ್ಕಿಂತ 10 ಅಡಿ ಜಾಸ್ತಿ ನೀರು ಅಣೆಕಟ್ಟಿನಲ್ಲಿ ತುಂಬಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ರೈತರ ಐ.ಪಿ.ಪಂಪ್‌ಸೆಟ್‌ಗಳಿಗೆ ಒದಗಿಸುತ್ತಿದ್ದ ವಿದ್ಯುತ್ ಮೊದಲಿನಷ್ಟು ಅವಶ್ಯಕತೆ ಇಲ್ಲ. ಹೀಗಾಗಿ ಸಾಕಷ್ಟು ವಿದ್ಯುತ್ ಕೊಡುವಲ್ಲಿ ಯಶಸ್ವಿಯಾಗಿದ್ದೇವೆ. ಹವಾಮಾನ ಇಲಾಖೆ ವರದಿ ಮಾಡಿದಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ. ಮಳೆ ಚೆನ್ನಾಗಿ ಬಂದರೆ ವಿದ್ಯುತ್ ಸಮಸ್ಯೆ ಇಲ್ಲದಂತಾಗಬಹುದೆಂದು ಅಭಿಪ್ರಾಯಪಟ್ಟರು.

ನಿನ್ನೆ ಉತ್ತರಕನ್ನಡದ ತದಡಿ ಉಷ್ಣ ವಿದ್ಯುತ್ ಸ್ಥಾವರದ ಬಗ್ಗೆ ವಿಶೇಷ ಸಭೆ ನಡೆಸಲಾಗಿದೆ. ಮಾಧ್ಯಮಗಳಲ್ಲಿ ವರದಿಯದಂತೆ ಸ್ಥಾವರ ಸ್ಥಾಪಿಸಲು ಯಾವುದೇ ವಿರೋಧ ಇಲ್ಲ. ಇದೊಂದು ಸುಳ್ಳು ಸುದ್ದಿ ಎಂದರು. ತದಡಿ ಯೋಜನೆಯಿಂದ 4000 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದು, ಕೇಂದ್ರ ಸರ್ಕಾರ ಯೋಜನೆಗಾಗಿ 20ಸಾವಿರ ಕೋಟಿ ನೀಡುವುದಾಗಿ ಭರವಸೆ ಕೊಟ್ಟಿದೆ. ಹಾಗೆಯೇ ಗುಂಡ್ಯಾ ಪ್ರಾಜೆಕ್ಟ್ ಸ್ಥಾಪನೆಯನ್ನು ಕೇಂದ್ರ ಸರ್ಕಾರದಿಂದ ಅನುಮತಿ ದೊರಕಿದೆ. ಶಿವನಸಮುದ್ರ ವಿದ್ಯುತ್ ಸ್ಥಾವರದ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಉನ್ನತ ಮಟ್ಟದ ಚರ್ಚೆ ನಡೆಯುತ್ತಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ರೈತರಿಗೆ 10 ಎಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ನಿರಂತರ ಜ್ಯೋತಿ ಯೋಜನೆ ಜಾರಿಗೆ ತರಲು ಯೋಚಿಸುತ್ತಿರುವುದಾಗಿ ರಾಜ್ಯಕ್ಕೆ ವಿದ್ಯುತ್ ಒದಗಿಸುತ್ತಿರುವ ಪ್ರಮುಖ ಜಿಲ್ಲೆಗಳಾದ ಉತ್ತರ ಕನ್ನಡ, ರಾಯಚೂರು, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಿಗೆ ಆದ್ಯತೆ ಮೇಲೆ 24 ಗಂಟೆ ನಿರಂತರ ವಿದ್ಯುತ್ ಸಂಪರ್ಕ ಒದಗಿಸಲು ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿರುವುದಾಗಿ ಹೇಳಿದರು.

ಮೂರು ತಿಂಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸೋಲಾರ್ ವಿದ್ಯುತ್ ಬಳಸುವಂತೆ ಜಾರಿಗೆ ತರಲಾಗುವುದು. ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸೋಲಾರ್ ವಿದ್ಯುತ್ ಬಳಸುವಂತೆ ಕಾನೂನು ಜಾರಿ ಮಾಡುವುದಾಗಿ ತಿಳಿಸಿದರು.

ಸಂಸದ ಬಿ.ವೈ.ರಾಘವೇಂದ್ರ, ನಗರಸಭಾ ಅಧ್ಯಕ್ಷ ಎನ್.ಜೆ.ರಾಜಶೇಖರ್, ಸೂಡಾ ಅಧ್ಯಕ್ಷ ಜ್ಞಾನೇಶ್ವರ್, ಜಯಲಕ್ಷ್ಮೀಈಶ್ವರಪ್ಪ, ಗಿರೀಶ್ ಪಟೇಲ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಪದ್ಮನಾಭ್ ಭಟ್, ದತ್ತಾತ್ರಿ ಸೇರಿದಂತೆ ಹಲವರು ಬಾಗಿನ ಸಲ್ಲಿಸುವಾಗ ಉಪಸ್ಥಿತರಿದ್ದರು.

ಚಿತ್ರ: ಕೆ.ಆರ್.ಸೋಮನಾಥ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X