ನಿಲೇಕಣಿಯನ್ನು ಕ್ಯಾಂಪಸ್ಸಿನಿಂದ ಬೀಳ್ಕೊಟ್ಟ ಕ್ಷಣ.
ಇನ್ಫೋಸಿಸ್ ಸಭಾಂಗಣ ಕೇವಲ 2000 ಮಂದಿಗೆ ಮಾತ್ರ ಸೀಮಿತವಾಗಿರುವ ಸಭಾಂಗಣವಾಗಿದೆ. ಆದರೆ, ಗುರುವಾರ ನಡೆದ ಬಿಳ್ಕೂಡುಗೆ ಸಮಾರಂಭದಲ್ಲಿ ಸಭಾಂಗಣ ಗಿಜಗುಟ್ಟುತ್ತಿತ್ತು. ಕುಳಿತುಕೊಳ್ಳಲು ಆಸನಗಳು ಇಲ್ಲದಿದ್ದರೂ ತಮ್ಮ ನೆಚ್ಚಿನ ಮುಖ್ಯಸ್ಥರ ಬಿಳ್ಕೂಡುಗೆಯನ್ನು ನೋಡಿ ಆನಂದಿಸಬೇಕು ಎಂದು ಅಭಿಮಾನದಿಂದ ಕಂಪನಿಯ ಎಲ್ಲ ಉದ್ಯೋಗಿಗಳು ಹಾಜರಿದ್ದರು. ಇದರ ಜೊತೆಗೆ ಜಾಗತಿಕ ಮಟ್ಟದ ಕಂಪನಿಯಾಗಿರುವ ಇನ್ಫೋಸಿಸ್ ನಲ್ಲಿ ವಿಶ್ವದಾದ್ಯಂತ ಸುಮಾರು 1 ಲಕ್ಷ ಮಂದಿ ಉದ್ಯೋಗಿಗಳು ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಂದನ್ ಅವರ ಬಿಳ್ಕೂಡುಗೆಯ ಕಾರ್ಯಕ್ರಮವನ್ನು ಇನ್ಫಿಯ ಇತರ ಎಲ್ಲ ಕಚೇರಿಗಳಲ್ಲಿ ಉದ್ಯೋಗಿಗಳು ವೀಕ್ಷಿಸುವಂತಾಗಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ನಂದನ್ ನಿಲೇಕಣಿ ಅವರು ಸುಮಾರು 28 ವರ್ಷ ಕಾಲ ಇನ್ಫೋಸಿಸ್ ಕಂಪನಿಗೆ ಬೆವರು ಹರಿಸಿದ್ದಾರೆ. ಕಂಪನಿಯನ್ನು ಕಟ್ಟಿ ಬೆಳೆಸಿದ ನಾಯಕ ದೇಶದ ಮಹತ್ವಾಕಾಂಕ್ಷೆ ಯೋಜನೆಗೆ ನಿಯುಕ್ತಿಗೊಂಡಿರುವುದು ಎಲ್ಲರಿಗೂ ಸಂತಸ ಸಂಗತಿಯೇ ಆದರೂ, ಉದ್ಯೋಗಿಗಳ ಮನಸ್ಸು ಭಾರವಾಗಿರುವ ವಾಸನೆಯಂತೂ ಕಂಡು ಬಂದಿತು. ನನಗಂತೂ ಇನ್ಫಿಯ ಒಂದು ಅವಿಭಾಜ್ಯ ಅಂಗ ಕಳಚಿಕೊಂಡಿರುವ ಅನುಭವವಾಯಿತು. ನನ್ನ ಇತರ ಕೆಲವು ಉದ್ಯೋಗಿಗಳು ನಂದನ್ ಅವರ ಕೈಕುಲುಕಿ ಸಂಭ್ರಮಿಸಿದರೆ, ಇನ್ನಷ್ಟು ಜನ ಇಂತಹ ಒಬ್ಬ ಪ್ರಚಂಡ ಬಾಸ್ ನನ್ನು ಕಳೆದುಕೊಳ್ಳುವುದು ಹೇಗೆ ಎಂಬ ಕಣ್ಣೀರು ತರಿಸಿಕೊಂಡಿದ್ದು ಉಂಟು.
ನಂದನ್ ನಿಲೇಕಣಿ ಅವರ ತಾಯಿ ದುರ್ಗಾ, ಪತ್ನಿ ರೋಹಿಣಿ, ಮಗ ನಿಹಾರ್, ಮಗಳು ಜಾಹ್ನವಿ. ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ, ಸುಧಾ ಮೂರ್ತಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್ ಗೋಪಾಲಕೃಷ್ಣನ್, ನಿರ್ದೇಶಕರಾದ ಎನ್ ಎಸ್ ರಾಘವನ್ ಮತ್ತು ಎಸ್ ಡಿ ಸಿಬುಲಾಲ್ ಮತ್ತಿತರ ಕಂಪನಿಯ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಮ್ಮ ಕಂಪನಿಯ ಎಲ್ಲ ಘಟಾನುಘಟಿಗಳು ಇಂಥ ಒಂದು ಸನ್ನಿವೇಶದಲ್ಲಿ ಒಟ್ಟಾಗಿದ್ದುದನ್ನು ನಾನು ನೋಡಿದ್ದು ಇದೇ ಮೊದಲಬಾರಿ.
ಬಿಳ್ಕೂಡುಗೆಗೆ ಉತ್ತರವಾಗಿ ಮಾತನಾಡಿದ ನಂದನ್ ನಿಲೇಕಣಿ, "ನಿಮ್ಮನ್ನೆಲ್ಲ ತೊರೆದು ಹೋಗುತ್ತಿರುವುದಕ್ಕೆ ಬೇಸರವಾಗುತ್ತಿದೆ, ಹೃದಯ ಭಾರವಾಗುತ್ತಿದೆ. ಆದರೆ, ನನ್ನ ಕಣ್ಣೇದುರಿಗೆ ಇರುವ ಸವಾಲು ಬೃಹದಾಕಾರವಾಗಿದೆ. ನನ್ನ ಗಮನ ಇನ್ನೂ ಗುರುತಿನ ಚೀಟಿಯ ಯಜ್ಞದ ಕಡೆಗೆ ಎಂದರು "
ಈ ಸಂದರ್ಭದಲ್ಲಿ ಮಾತನಾಡಿದ ಸಿಇಓ ಎಸ್ ಗೋಪಲಾಕೃಷ್ಣನ್, 'ನಂದನ್ ಇನ್ಫೋಸಿಸ್ಸಿನ ಅಪ್ರತಿಮ ವ್ಯಕ್ತಿ. ಪ್ರಕಾಂಡ ಪಾಂಡಿತ್ಯ ಹೊಂದಿದ್ದಾರೆ. ಅವರ ಜಾಣ್ಮೆಯಿಂದಾಗಿ ಇಂದು ಇನ್ಪೋಸಿಸ್ ಎಂಬ ಕಂಪನಿ ಜಗದ್ವಿಖ್ಯಾತಿ ಹೊಂದಿದೆ' ಎಂದು ಪ್ರಶಂಸಿದರು. ನಂದನ್ ಅವರ ಸೇವೆಯನ್ನು ಕಂಪನಿ ಕಳೆದುಕೊಳ್ಳಲಿದೆ ಎಂಬುದು ಭರಿಸಲಾರದ ದುಖಃ. ಆದರೆ, ಇವರಿಂದ ದೇಶದ ಏಳ್ಗೆ ಆಗಲಿದೆ ಎನ್ನುವುದಾದರೆ ನಾವೆಲ್ಲರೂ ಮುಕ್ತ ಮನಸ್ಸಿನಿಂದ, ಸಂತೋಷದಿಂದ ಅವರನ್ನು ದೇಶದ ಸೇವೆಗೆ ಕಳುಹಿಸಿಕೊಡೋಣ ಎಂದು ಗೋಪಾಲಕೃಷ್ಣನ್ ಹೇಳುವಾಗ ಅವರ ಮುಖದಲ್ಲಿ ಭಾವೋದ್ವೇಗ ಕಂಡು ಬಂದಿತು.