ಕ್ಯಾತಮಾರನಹಳ್ಳಿಯಲ್ಲಿ ಮುಂದುವರೆದ ಗಲಭೆ
ಅತ್ತ ಇಂದು ವಿಧಾನಸಭೆಯಲ್ಲಿ ಅರಂಭವಾಗಿರುವ ಅಧಿವೇಶನದಲ್ಲಿ ಮೈಸೂರಿನ ಕ್ಯಾತಮಾರನಹಳ್ಳಿ ಹೊತ್ತಿ ಉರಿದ ಕೋಮುಗಲಭೆಗೆ ಸಂಬಂಧಿಸಿದಂತೆ ಸರಕಾರವನ್ನು ಪ್ರತಿಪಕ್ಷಗಳು ತೀವ್ರವಾಗಿ ತರಾಟೆಗೆ ತಗೆದುಕೊಳ್ಳುತ್ತಿರುವ ಮಧ್ಯೆದಲ್ಲಿ ಇಂದು ಈ ಪ್ರಕರಣ ನಡೆದಿದೆ. ಕ್ಯಾತಮಾರನಹಳ್ಳಿ ಗಲಭೆಯಲ್ಲಿ ಬಂಧಿತರಾಗಿರುವ ಅಮಾಯಕರ ಬಿಡುಗಡೆಗೆ ಒತ್ತಾಯಿಸಿ ಪಾಫುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಜೈಲ್ ಭರೋ ಚಳುವಳಿ ಹಮ್ಮಿಕೊಂಡಿತ್ತು.
ನಗರದ ಪೈಲೆಟ್ ವೃತ್ತಕ್ಕೆ ಪ್ರತಿಭಟನಾ ಮೆರವಣಿಗೆ ಬರುತ್ತಿದ್ದಂತೆಯೇ ಉದ್ರಿಕ್ತಗೊಂಡ ಕಿಡಿಗೇಡಿಗಳು ಪೊಲೀಸರತ್ತ ಕಲ್ಲು ತೂರಾಟ ಆರಂಭಿಸಿದ್ದಾರೆ. ಇದರಿಂದ ಗುಂಪು ಚೆದುರಿಸಲು ಪೊಲೀಸರು ಆಶ್ರುವಾಯು ಸಿಡಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಲಾಠಿ ಪ್ರಹಾರ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಪತ್ರಕರ್ತರು ಸೇರಿದಂತೆ ಅನೇತರು ಗಾಯಗೊಂಡಿದ್ದಾರೆ. ಮೈಸೂರಿನಲ್ಲಿ 144 ಸೆಕ್ಷನ್ ಜಾರಿಯಲ್ಲಿತ್ತು.
ಒಂದು ಕೋಮಿಗೆ ಸೇರಿದ ಧಾರ್ಮಿಕ ಶಾಲೆಯೊಂದನ್ನು ನೆಲ ಸಮಗೊಳಿಸಿದ ಹಿನ್ನೆಲೆಯಲ್ಲಿ ಉದ್ಭವಿಸಿದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕೋಮುಗಲಭೆಗೆ ಕಾರಣವಾಗಿತ್ತು. ಈ ದುರ್ಘಟನೆಯಲ್ಲಿ ಮೂರು ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಜನರು ಗಾಯಗೊಂಡಿರುವ ಘಟನೆ ಕ್ಯಾತಮಾರನಹಳ್ಳಿಯಲ್ಲಿ ಗುರುವಾರ ಬೆಳಗ್ಗೆ ನಡೆದಿತ್ತು.
ಗಾಯಿತ್ರಿಪುರಂನಲ್ಲಿರುವ ಒಂದು ಸಮುದಾಯಕ್ಕೆ ಸೇರಿದ ಧಾರ್ಮಿಕ ಶಾಲೆಯನ್ನು ಕೆಲವರು ನೆಲಸಮಗೊಳಿಸಿದ್ದು ಇನ್ನೊಂದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. ಧಾರ್ಮಿಕ ಶಾಲೆ ನೆಲಸಮಗೊಳಿಸಿರುವ ಸುದ್ದಿ ಹಬ್ಬುತ್ತಿದ್ದಂತೆಯೇ ಒಂದು ಕೋಮಿನ ಜನ ನೂರಾರು ಮಂದಿ ಒಂದೆಡೆ ಸೇರಿ ಪ್ರತಿಭಟನೆ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಉದ್ರಿಕ್ತರ ಗುಂಪು ಕೈಗೆ ಸಿಕ್ಕ ಜನರನ್ನು ಥಳಿಸಿರುವ ಘಟನೆ ನಡೆದಿತ್ತು.
(ದಟ್ಸ್ ಕನ್ನಡ ವಾರ್ತೆ)