ಕರಾವಳಿಯಲ್ಲಿ ಮುಂಗಾರು ಮಳೆಯ ಲೀಲೆ
* ಚಿದಂಬರ ಬೈಕಂಪಾಡಿ, ಮಂಗಳೂರು
ಕರಾವಳಿಯಲ್ಲಿ ಮತ್ತೆ ಮಳೆ ಅಬ್ಬರಿಸಿದೆ. ಪರಿಣಾಮವಾಗಿ ಬತ್ತಿಹೋಗಿದ್ದ ಹಳ್ಳ-ಕೊಳ್ಳಗಳು ತುಂಬಿವೆ. ಒಣಗಿದ್ದ ಗಿಡಮರಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಹದವಾದ ಮಳೆಯಾಗಿರುವುದರಿಂದ ಕೃಷಿಕರ ಮುಖದಲ್ಲಿ ಮಂದಹಾಸ ಮಿನುಗುತ್ತಿದೆ. ಕರಾವಳಿಯಲ್ಲಿ ಇನ್ನೂ ಉಳಿದುಕೊಂಡಿರುವ ಗದ್ದೆಗಳಲ್ಲಿ ನಾಟಿಕೆಲಸ ನಡೆಯುತ್ತಿದೆ.
ಮಳೆ ನೀರಿನಿಂದ ಪಾಳುಗದ್ದೆಗಳು ತುಂಬಿರುವುದರಿಂದ ಗ್ರಾಮೀಣ ಕ್ರೀಡೆಗಳಿಗೆ ಅನುವಾಗಿದೆ. ಕೆಸರುಗದ್ದೆ ಓಟ, ಕೆಸರುಗದೆಯಲ್ಲಿ ಹಗ್ಗಜಗ್ಗಾಟ ಇತಾದಿಗಳನ್ನು ಕಾಣಬಹುದು. ಮರೆತುಹೋದ ಗ್ರಾಮೀಣ ಕ್ರೀಡೆಗಳು ಮತ್ತೆ ಜೀವಪಡೆದುಕೊಳ್ಳುವಷ್ಟರಮಟ್ಟಿಗೆ ಮಳೆ ನೆರವಾಗಿದೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹೆದರಿರುವ ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ಮೂರುದಿನಗಳ ರಜೆ ಘೋಷಿಸಿದೆ. ಕಳೆದ ವರ್ಷ ಮಂಗಳೂರು ಸಮೀಪದ ಉಳಾಯಿಬೆಟ್ಟು ಎಂಬಲ್ಲಿ ಶಾಲಾ ಮಕ್ಕಳಿದ್ದ ವ್ಯಾನು ನದಿ ನೀರಿನಲ್ಲಿ ಮುಳುಗಿ ಸಂಭವಿಸಿದ್ದ ದುರಂತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ಕೊಡಲಾಗಿದೆ.
ಇಷ್ಟೆಲ್ಲವೂ ಪ್ರಕೃತಿಯ ಸಹಜ ಕ್ರಿಯೆ. ಮಳೆಗಾಲದಲ್ಲಿ ಮಳೆ ಬರುವುದು ಸ್ವಾಭಾವಿಕ. ಕರಾವಳಿಯಲ್ಲಿ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿರುವುದೂ ಸಂತಸದ ಸಂಗತಿ. ಆದರೆ ಮಂಗಳೂರು ಸಹಿತ ಪಟ್ಟಣ ಪ್ರದೇಶಗಳಲ್ಲಿ ಮನೆಗಳು ಜಲಾವೃತವಾಗಿರುವುದು ಅಥವಾ ಪ್ರವಾಹ ಬಂದಿದೆ ಎನ್ನುವುದು ಶುದ್ದ ಸುಳ್ಳು. ಕೇವಲ ಮೂರು ದಿನಗಳ ಮಳೆ ಮಾತ್ರ ಬಿದ್ದಿದೆ. ಸಾಮಾನ್ಯವಾಗಿ ಏಪ್ರಿಲ್ ಹದಿನೈದರಿಂದ ನಿಧಾನವಾಗಿ ಕರಾವಳಿಯಲ್ಲಿ ಮಳೆ ಸುರಿಯಲು ಆರಂಭವಾಗಬೇಕು. ಮಳೆಯ ಆರಂಭವೇ ಜುಲೈ ಐದರಿಂದ ಆಗಿದೆ. ಆದ್ದರಿಂದ ಮಳೆ ಆಗಿಲ್ಲ ಎನ್ನುವ ಆತಂಕ ಕಾಡುತ್ತಿದೆ.
ಆದರೆ ಮಂಗಳೂರು ಸುತ್ತಮುತ್ತ ಪ್ರವಾಹ ಅಥವಾ ಮನೆಗಳಿಗೆ ಮಳೆನೀರು ನುಗ್ಗಿದೆ ಎನ್ನುವುದು ಮನುಷ್ಯ ನಿರ್ಮಿತ ದುಷ್ಕೃತ್ಯಗಳಿಂದ ಆದ ಅನಾಹುತ. ಗದ್ದೆಗಳನ್ನು ಸಮತಟ್ಟು ಮಾಡಿ ಮನೆ ಕಟ್ಟಿದ್ದಾರೆ. ನೀರು ನಿಲ್ಲುತ್ತಿದ್ದ ತಗ್ಗುಪ್ರದೇಶಗಳನ್ನು ಮಣ್ಣು ತುಂಬಿಸಿ ಮಹಲು ಕಟ್ಟಿಕೊಂಡಿದ್ದಾರೆ. ಮಳೆ ನೀರು ಹರಿದುಹೋಗಲು ಇದ್ದ ಚರಂಡಿಗಳನ್ನೂ ಮನೆಗಳ ಆವರಣಗೋಡೆ ಆವರಿಸಿಕೊಂಡಿವೆ. ಪರವಾನಿಗೆ ಪಡೆಯುವಾಗ ಇದ್ದ ಚರಂಡಿ, ಪಾರ್ಕಿಂಗ್ ಸ್ಥಳ ಕಾಣೆಯಾಗಿದೆ. ಹಾಗಾದರೆ ಮಳೆನೀರು ಎಲ್ಲಿ ಹರಿದುಹೋಗಬೇಕು? ಎಲ್ಲಿ ಸಂಗ್ರಹವಾಗಬೇಕು?
ಮಳೆ ನೀರು ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ, ಒತ್ತಡಕ್ಕೂ ಮಣಿಯುವುದಿಲ್ಲ. ಅಂಗಡಿಯಾದರೇನು? ಬೆಡ್ ರೂಮ್ ಆದರೇನು? ಮುಲಾಜಿಲ್ಲದೆ ಹರಿಯುತ್ತದೆ, ಅಡ್ಡಿಪಡಿಸಿದರೆ ಧರೆಗುರುಳಿಸಿ ಮುನ್ನಡೆಯುತ್ತದೆ. ಇದೇ ಮಂಗಳೂರಲ್ಲೂ ಆಗಿರುವುದೇ ಹೊರತು ದೂರದಲ್ಲಿರುವವರು ಮಂಗಳೂರು ಮಳೆಗೆ ಹೌಹಾರಬೇಡಿ. ಇಲ್ಲಿ ಸಂಭವಿಸುತ್ತಿರುವ ಮಳೆ ಅನಾಹುತಗಳಿಗ ಮಳೆ ಕಾರಣವಲ್ಲ, ಮನುಷ್ಯರೇ ಕಾರಣ, ಲಂಚ ಪಡೆದುಕೊಂಡು ಅನುಮತಿಕೊಟ್ಟು ಕೈತೊಳೆದುಕೊಂಡ ಅಧಿಕಾರಿಗಳು ಹೊಣೆ. ನೀರಿಗೆ ಯಾಕೆ ಚರಂಡಿ ಎಂದು ಒತ್ತುವರಿಮಾಡಿಕೊಂಡು ಸುಂದರ ಮಹಲು ಕಟ್ಟಿಕೊಂಡು ಬೆಚ್ಚಗಿದ್ದವರ ನಿದ್ದೆಕೆಡಿಸಿದೆ ಮಳೆ.
ಬಿ.ಸಿ.ರೋಡ್ ನಿಂದ ಸುರತ್ಕಲ್ ತನಕ ಇರ್ಕಾನ್ ಸಂಸ್ಥೆ ನಿರ್ಮಿಸುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿಯಿಂದಾಗಿ ಮತ್ತಷ್ಟು ಆವಾಂತರ ಉಂಟಾಗಿದೆ. ರಸ್ತೆ ನಿರ್ಮಿಸಲಾಗಿದೆಯೇ ಹೊರತು ರಸ್ತೆ ಇಕ್ಕೆಲಗಳಲ್ಲಿ ನೀರುಹರಿದು ಹೋಗಲು ಚರಂಡಿ ಮಾಡಿಲ್ಲ. ಈ ಕಾರಣದಿಂದ ಮಳೆನೀರು ತನಗೆ ಬೇಕಾದಲ್ಲಿಗೆ ನುಗ್ಗುತ್ತಿದೆ. ಇದು ಕರಾವಳಿ ಮಳೆಯ ಸ್ಯಾಂಪಲ್ ಮಾತ್ರ. ನೇತ್ರಾವತಿ, ಗುರುಪುರ, ಪಯಸ್ವಿನಿ, ಶಾಂಭವಿ, ವಾರಾಹಿ, ಪಂಚಗಂಗಾವಳಿ ನದಿಗಳು ತುಂಬಿದರೆ ಆಗ ಗೊತ್ತಾಗುತ್ತೆ ಮುಂಗಾರು ಮಳೆಯ ಲೀಲೆ, ಕಾಯುತ್ತಿರಿ!