ಬಯೋಟೆಕ್ ನೀತಿ ಜಾರಿಗೆ ಸಂಪುಟ ಅಸ್ತು
ಗ್ರಾಮಲೆಕ್ಕಿಗರ ಹುದ್ದೆಗೆ ಪಿ.ಯು.ಸಿ. ಅಥವಾ ತತ್ಸಮವಾದ ವಿದ್ಯಾರ್ಹತೆ ಎಂದು ನಮೂದಿಸಲಾಗಿದ್ದು ಅದರಲ್ಲಿನ ಗೊಂದಲವನ್ನು ಸ್ವಷ್ಟಗೊಳಿಸಲು ಪಿಯುಸಿ ಅಥವಾ ಸಿಬಿಎಸ್ ಸಿಯ 12ನೇ ತರಗತಿ ಎಂದು ತೀರ್ಮಾನಿಸಿ ಹೊಸದಾಗಿ ಅರ್ಜಿ ಕರೆಯಲಾಗುವುದು.
ಕಳೆದ ಮೂರು ವರ್ಷಗಳಲ್ಲಿ ಜೂನಿಯರ್ ಕಾಲೇಜು ಕಟ್ಟಡ ನಿರ್ಮಾಣ ಮತ್ತಿತರ ಸೌಲಭ್ಯಗಳಿಗಾಗಿ ನಬಾರ್ಡ್ನಿಂದ ಸಾಲ ಸೌಲಭ್ಯ ಒದಗಿಸಲಾಗಿದ್ದು, ಇದು ದರ ಏರಿಳಿತವನ್ನು ಗಮನದಲ್ಲಿಟ್ಟು ರಾಜ್ಯ ಸರ್ಕಾರವು 33 ಕೋಟಿ ರೂ.ಗಳನ್ನು ಹಣಕಾಸು ಇಲಾಖೆಯಿಂದ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ.
ಬಯೋಟೆಕ್ ಪಾಲಸಿ ಜ್ಞಾನನೀತಿ ಹಂತ 2 ನ್ನು ಅಳವಡಿಸಿಕೊಂಡು ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಬಗೆಯ ಉತ್ತೇಜನ ಒದಗಿಸಲಾಗುತ್ತದೆ. ಕರ್ನಾಟಕವು ದೇಶದಲ್ಲೆ ಈ ಕ್ಷೇತ್ರದಲ್ಲಿ ಪ್ರಥಮ ಸ್ಥಾನದಲ್ಲಿದ್ದು 2001 ರಲ್ಲಿ ಕೇವಲ 47 ಬಯೋಟೆಕ್ ಕಂಪನಿಗಳಿದ್ದದ್ದು, ಈಗ 140 ಕ್ಕೆ ಏರಿದೆ. 200 ಕೋಟಿ ರಫ್ತು ವರಮಾನ ಇದ್ದದ್ದು ಈಗ 3000 ಕೋಟಿ ರೂ.ಗಳಿಗೆ ಏರಿದೆ. ಇದನ್ನು ಗಮನದಲ್ಲಿಟ್ಟು ನೂತನ ನೀತಿಯಡಿ ಜೋನ್ 4 ರಡಿ ಬರುವ ಉದ್ಯಮಗಳಿಗೆ ಜೂನ್ 3ರಡಿ ದೊರಕುತ್ತಿದ್ದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ 50 ಕೋಟಿ ರೂ. ಪ್ರತ್ಯೇಕ ನಿಧಿ ಒದಗಿಸಲು ಹಾಗೂ ಉದ್ದಿಮೆಗೆ ಮೂಲಭೂತ ಸೌಕರ್ಯ ಒದಗಿಸಲು 100 ಕೋಟಿ ರೂ.ಗಳನ್ನು ಪೂರೈಸಲು ತಾತ್ವಿಕವಾಗಿ ಒಪ್ಪಿಗೆ ನೀಡಲಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣ ಕುರಿತು ಮೇತಾಸ್ ಕಂಪನಿಯೊಂದಿಗಿನ ಕರಾರು ರದ್ದುಪಡಿಸಲು ಈ ಹಿಂದೆ ತೀರ್ಮಾನಿಸಿದ್ದು, ಇದೀಗ ಭಾರತ ಸರ್ಕಾರದ ಕಾರ್ಪೋರೇಟ್ ಕಂಪನಿ ಸಚಿವಾಲಯದಿಂದ ಪತ್ರ ಬಂದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಅದೇ ಕಂಪನಿ ಮುಂದಿನ 12 ತಿಂಗಳಲ್ಲಿ ಹಾಲಿ ಜಾರಿಯಲ್ಲಿರುವ ಷರತ್ತುಗಳಿಗೆ ಒಳಪಟ್ಡು ಪೂರ್ಣಗೊಳಿಸಲು ಒಪ್ಪಿಗೆ ನೀಡಲಾಯಿತು.
ಭಿಕ್ಷುಕರ ಕಾಲೋನಿಯ 308 ಎಕರೆ ಪ್ರದೇಶದಲ್ಲಿ 167 ಎಕರೆ ಜಾಗವು ಸರ್ಕಾರಿ ಸ್ವಾಮ್ಯದಲ್ಲಿದ್ದು, ಈ ಪ್ರದೇಶದಲ್ಲಿ ಲಾಲ್ಬಾಗ್ ಮಾದರಿಯಲ್ಲಿ ಉದ್ಯಾನವನ ಇನ್ನಿತರ ನಾಗರೀಕ ಸೌಲಭ್ಯ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡು ಹೊಸರೂಪ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಲು ಸಂಪುಟ ತೀರ್ಮಾನಿಸಿತು.
(ದಟ್ಸ್ ಕನ್ನಡ ವಾರ್ತೆ)