ಕೆಂಪು ಕಟ್ಟಡದಲ್ಲಿ ನಡೆದಿದೆ ಮೋಹಿನಿ ಆಟ್ಟಂ
* ಧ್ಯಾನ್ ಪೂಣಚ್ಚ
ಬೆಂಗಳೂರು : ತಂಗಾಳಿಯಲ್ಲಿ ನಾನು ತೇಲಿ ಹೋದೆ, ಓ ಇನಿಯಾ..! ಈ ಜನಪ್ರಿಯ ಚಿತ್ರಗೀತೆಯನ್ನು ಕೇಳದವರು ಅಪರೂಪ.
ಅಮಾವಾಸ್ಯೆಯ ಆ ರಾತ್ರಿ, ಕಾರ್ದಾಲ ಕತ್ತಲು, ದಟ್ಟ ಹೊಗೆ ಆವರಿಸುತ್ತದೆ. ಗಾಳಿ ರೊಯ್ಯನೆ ಬೀಸಲಾರಂಭಿಸುತ್ತದೆ. ಶ್ವೇತವರ್ಣದ ಸೀರೆಯುಟ್ಟ ಸುಂದರಿಯೊಬ್ಬಳು ಮುಖ ತೋರಿಸದೇ ಮರಗಳ ಮಧ್ಯೆ ಹಾಡಿಕೊಂಡು ಹೋಗುತ್ತಿರುತ್ತಾಳೆ...ಹಿನ್ನೆಲೆ ಸಂಗೀತದೊಂದಿಗೆ ಘಲ್ ...ಘಲ್ ಗೆಜ್ಜೆ ನಾದ....ಹೀರೊ ಬಿಡದೇ ಹಿಂಬಾಲಿಸುತ್ತಾನೆ.... ಇಂಥದೊಂದು ದೃಶ್ಯ ನೈಜ ಘಟನೆಯ ಸ್ವರೂಪದಲ್ಲಿ ಕಣ್ಣ ಮುಂದೆ ಬಂದರೆ...? ನೋಡಿದವರ ಎದೆ ಝಲ್ ಎನ್ನದೆ ಇರುತ್ತದೆಯೇ?
ಕಲ್ಪನೆಯೋ, ವದಂತಿಯೋ.... ಏನೋ...ಅಂತೂ ಹೈಕೋರ್ಟ್ ಆವರಣದಲ್ಲಿ ದೆವ್ವ ಇದೆ ಎಂಬ ಗುಸುಗುಸು ಶುರುವಾಗಿರುವುದಂತೂ ನಿಜ. ಅದರಲ್ಲೂ ದೆವ್ವ ಸಾಮಾನ್ಯದ್ದಲ್ಲವಂತೆ. ಚೆಲುವೆಯಂತೆ, ವಯ್ಯಾರವಂತೆ, ಗೆಜ್ಜೆ ಸಪ್ಪಳವಂತೆ, ಇನ್ನೂ ಏನೇನೋ ಅಂತೆಕಂತೆಗಳು.
ಕಬ್ಬನ್ ಪಾರ್ಕ್ನಲ್ಲಿ ರಾತ್ರಿ ಹೊತ್ತು ವಯ್ಯಾರದಿಂದ ನಡೆದು ಹೋಗುವ ಮಂಗಳ ಮುಖಿ'ಯರನ್ನು ನೋಡಬಹುದು. ಆದರೆ ಈ ದೆವ್ವ ಎಲ್ಲಿಂದ ಬಂತು? ಎಂಬ ಪ್ರಶ್ನೆ ಎಲ್ಲರ ತಲೆ ತಿನ್ನತೊಡಗಿದೆ. ಅರೆ, ಹೋಗ್ರಿ, ಈ ಕಾಲದಲ್ಲಿ ದೆವ್ವಗಿವ್ವ ಎಲ್ಲಿರ್ತದೆ. ಅದೆಲ್ಲ ಸುಳ್ಳು' ಅಂದರೆ, ಇಲ್ಲ ಸಾರ್, ನಾವೇ ನೋಡಿದ್ದೀವಿ. ಅಮಾವಾಸ್ಯೆ ದಿನ ಬೇಕಾದರೆ ಬನ್ನಿ. ನಿಮಗೂ ತೋರಿಸ್ತವೆ' ಎನ್ನುತ್ತಾರೆ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸರು.
ಹೆಣ್ಣು ದೆವ್ವ ವಯ್ಯಾರದಿಂದ ನಡೆದುಕೊಂಡ ಹೋಗ್ತದೆ. ಆವಾಗ ಗಾಳಿ ಕೂಡ ಒಂದು ಕ್ಷಣ ನಿಲ್ಲುತ್ತದೆ. ಇಡೀ ವಾತಾವರಣ ಏನೋ ಒಂಥರಾ ಆಗೋಗ್ತದೆ ಗೊತ್ತಾ?' ಎಂಬುದು ಪೊಲೀಸರ ದೆವ್ವ ಪುರಾಣದ ಮೊದಲ ಅಂಕ. ಭದ್ರವಾಗಿ ಮುಚ್ಚಿರುವ ಬಾಗಿಲುಗಳು ಭಾರಿ ಶಬ್ದದೊಂದಿಗೆ ತೆರೆದುಕೊಳ್ಳುತ್ತವೆ. ನೋಡಲು ಹೋದರೆ ಬಾಗಿಲು ಹಾಕಿದಂತಿರುತ್ತದೆ. ಇದ್ದಕ್ಕಿದ್ದಂತೆ ವಿದ್ಯುತ್ ದೀಪ ಆರುತ್ತದೆ. ಇಡೀ ಕಾರಿಡಾರ್ ನಿರ್ಮಾನುಷವಾಗಿದ್ದರೂ, ಯಾರೋ ಓಡಿಬರುವ ಅನುಭವ. ಕೆಳ ಮಹಡಿಯ ಕೋರ್ಟ್ ಹಾಲ್ ಸಂಖ್ಯೆ 26ರಿಂದ 40ರ ವರೆಗೆ ಈ ರೀತಿ ಆಗುತ್ತದೆ. ಇನ್ನು ಕ್ಯಾಂಟೀನ್ ಮೂಲೆಯಲ್ಲಿರುವ ಶೌಚಾಲಯಕ್ಕೆ ಮಹಿಳಾ' ಆಕೃತಿಯೊಂದು ಬಂದು ಹೊಗುತ್ತದೆ' ಎನ್ನುತ್ತಾರೆ ಕೆಲವರು.
ಒಂದೊಂದು ಸಾರಿ ಹೈಕೋರ್ಟ್ ಮುಂಭಾಗದ ಮೆಟ್ಟಿಲುಗಳ ಮೇಲೆ ಯಾರೋ ನಡೆದು ಹೋದಂತಾಗುತ್ತದೆ. ಗೆಜ್ಜೆ ಶಬ್ದ ಬೇರೆ. ಶಬ್ದ ಬಂದ ದಿಕ್ಕಿನ ಕಡೆಗೆ ಹೋದರೆ ಆಕೃತಿಯೊಂದು ಇಡೀ ಕೋರ್ಟ್ ಸುತ್ತಿಸುತ್ತದೆ. ಪಕ್ಕದಲ್ಲಿ 4-5 ಸಹದ್ಯೋಗಿಗಳಿದ್ದರೂ ಕಿರುಚಿಕೊಂಡಾಗ ಒಬ್ಬರ ಧ್ವನಿ ಮತ್ತೊಬ್ಬರಿಗೆ ಕೇಳಿಸುವುದಿಲ್ಲ. ಇಷ್ಟೇ ಅಲ್ಲ, ಅಮಾವಾಸ್ಯೆ ದಿನ ನಾಯಿಗಳ ಬೊಗಳುವಿಕೆ ಮಿತಿ ಮೀರುತ್ತದೆ. ಮಗುವೊಂದು ಸಣ್ಣ ಧ್ವನಿಯಲ್ಲಿ ಅಳುತ್ತದೆ. ಇನ್ನೂ ಏನೇನೋ ಆಗುತ್ತದೆ' ಎಂಬುದು ಪೊಲೀಸರ ಮುಂದುವರಿದ ಕಾಮೆಂಟ್ರಿ.
ಇತ್ತೀಚಿಗೊಂದು ದಿನ ಆ ಹೆಣ್ಣು ದೆವ್ವ ನಡು ರಾತ್ರಿಯಲ್ಲಿ ಕ್ಯಾಂಟೀನ್ ಬಾಗಿಲು ತಟ್ಟಿದೆ. ಒಳಗೆ ಮಲಗಿದ್ದ ಸಿಬ್ಬಂದಿ ಕಾವೇರಿಯಪ್ಪ ಬಾಗಿಲು ತೆಗೆದು ನೋಡಿದರೆ ಚೆಲುವೆ ನಗುತ್ತಾ ನಿಂತಿದ್ದಾಳೆ. ಕೈ ಸನ್ನೆ ಮಾಡಿ ಬರುವಂತೆ ಕರೆದಿದ್ದಾಳೆ. ಮುಂದೆ ಚೆಲುವೆ, ಹಿಂದೆ ಕಾವೇರಿಯಪ್ಪ. ನೋಡುತ್ತಿದ್ದಂತೆ ಚೆಲುವೆ ಬೀಗ ಹಾಕಿದ್ದ ಗೇಟಿನಲ್ಲಿ ನುಸುಳಿಕೊಂಡು ಹೋಗಿದ್ದಾಳೆ. ಆದರೆ ಕಾವೇರಿಯಪ್ಪನ ಕೈಲಿ ಗೇಟು ನುಸುಳಲು ಆಗಿಲ್ಲ. ಆತ ತಲೆ ಎತ್ತಿ ನೋಡಿದರೆ ಚೆಲುವೆಯ ಕಾಲುಗಳು ನೆಲದ ಮೇಲಿಲ್ಲ. ಕತ್ತು ಗಿರಗಿರ ತಿರುಗುತ್ತಿದೆ. ಚೆಲುವೆ ದೆವ್ವವಾಗಿ ಗಹಗಹಿಸುತ್ತಿದೆ. ತನಗಾದ ಈ ಅನುಭವವನ್ನು ಕಾವೇರಿಯಪ್ಪ ಹೇಳಿಕೊಂಡಿದ್ದಾನೆ.
ಈ ದೆವ್ವ ಕೊಡುತ್ತಿರುವ ಕಾಟ ಅಷ್ಟಿಷ್ಟಲ್ಲವಂತೆ. ಕ್ಯಾಂಟೀನ್ನಲ್ಲಿ 3 ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ರಿತೀಶ್ ಎಂಬಾತ ಮಗು ಅಳುತ್ತಿರುವ ಶಬ್ದ ಕೇಳಿ ಹೊರಗೆ ಹೋಗಿ ನೋಡಿದರೆ ಅದೇ ಚೆಲುವೆ. ಅಷ್ಟೇ, ಜ್ವರ ಎಂದು ಮಲಗಿದವನು ಮೇಲೆ ಏಳಲಿಲ್ಲ. ಊರಿಗೆ ಹೋದವನು ವಾಪಸ್ ಬಂದೂ ಇಲ್ಲ. ಅಮಾವಾಸ್ಯೆ ದಿನ ಪೇದೆಯೊಬ್ಬರು ಸಹದ್ಯೋಗಿಳೊಂದಿಗೆ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮಾತು ನಿಂತಿದೆ. ಕೈ ಕಾಲು ಸ್ವಾಧೀನ ಕಳೆದುಕೊಂಡಿದೆ. ಬಳಿಕ ಜ್ವರ ಕಾಣಿಸಿಕೊಂಡಿದೆ.
ಮತ್ತೊಂದು ಅಮಾವಾಸ್ಯೆ ದಿನ ದಫೇದಾರ್ ಒಬ್ಬರು ಕೆಳಗಿನ ಕೋರ್ಟ್ ಹಾಲ್ ಕಡೆ ಬಂದಾಗ ತಣ್ಣನೆಯ ಗಾಳಿ ಆವರಿಸಿದೆ. ಕಡತಗಳಿರುವ ಕೊಠಡಿಯಲ್ಲಿ ಬಾಗಿಲು ಒಡೆಯುವ ಶಬ್ದ. ಕಳ್ಳರಿರಬಹುದು ಎಂದು ಗಮನಿಸಿದರೆ ಗಾಳಿ ನಿಂತ ಅನುಭವ ಆಯಿತಂತೆ. ಅಂದ ಹಾಗೆ, ಈ ದೆವ್ವದ ಕಾಟದ ಬಗ್ಗೆ ನ್ಯಾಯಾಧೀಶರವರೆಗೆ ದೂರು ಹೋಗಿದೆ. ಒಂದು ದಿನ ನ್ಯಾಯಾಧೀಶರೇ ಖುದ್ದಾಗಿ ಪರೀಕ್ಷೆ ಮಾಡಲು ಬಂದಿದ್ದಾರೆ. ಆದರೆ ಅವರು ಬಂದ ದಿನ ಏನೂ ನಡೆದಿಲ್ಲವಂತೆ. ಕೆಂಪು ಕಟ್ಟಡದಲ್ಲಿ ನಡೆದಿದೆ
ಅಭಿಮತ
ಡಾ.ಸಿ.ಆರ್.ಚಂದ್ರಶೇಖರ್, ಮಾನಸಿಕ ತಜ್ಞ : ಯಾವ ದೆವ್ವವೂ ಇಲ್ಲ. ಭೂತವೂ ಇಲ್ಲ. ಇವೆಲ್ಲ ಕಲ್ಪನೆಗಳು. ಈ ರೀತಿಯ ಘಟನೆಗಳು ನಡೆಯಲಾರವು. ತನಿಖೆ ನಡೆಸಿದರೆ ನಿಜ ಸಂಗತಿ ಹೊರಬರುತ್ತದೆ. ಭ್ರಮೆಯಿಂದ ಹೀಗಾಗುತ್ತೆ. ಇದನ್ನು ಉಪೇಕ್ಷೆ ಮಾಡಬೇಕು.
ದೈವಜ್ಞ ಸೋಮಯಾಜಿ, ಖ್ಯಾತ ಜ್ಯೋತಿಷಿ : ಹಳೇ ಕಟ್ಟಡಗಳಲ್ಲಿ ಈ ರೀತಿ ಕಂಡು ಬರುವುದು ಸಾಮಾನ್ಯ. ಇತ್ತೀಚಿನ ತಮ್ಮ ಥಾಯ್ಲ್ಯಾಂಡ್ ಭೇಟಿಯಲ್ಲಿ ಇಂತಹ ಹಲವಾರು ವಿಚಾರಗಳು ಗಮನಕ್ಕೆ ಬಂದಿದೆ. ಹುಣ್ಣಿಮೆ, ಅಮಾವಾಸ್ಯೆ, ಸಂಕ್ರಾತಿಯ ದಿನಗಳಲ್ಲಿ ಈ ರೀತಿ ನಡೆಯುತ್ತದೆ. ದೆವ್ವಗಳು ಸಾಮಾನ್ಯವಾಗಿ ಹೆಣ್ಣಿನ ರೂಪದಲ್ಲೇ ಕಾಣಿಸಿಕೊಳ್ಳುತ್ತವೆ. ಕೊಲೆಯಂತಹ ಘಟನೆಗಳು ಈ ಪರಿಸರದಲ್ಲಿ ನಡೆದಿದ್ದರೆ ಅಥವ ನ್ಯಾಯ ಸಿಗದಿದ್ದಲ್ಲಿ ಈ ರೀತಿಯಾಗಬಹುದು. ಇಲ್ಲವೆ ಬೇರೆ ಕಡೆಯಿಂದ ಆವಾಹನೆ ಮಾಡಿ ತಂದು ಬಿಡುವ ಸಾಧ್ಯತೆಗಳೂ ಇವೆ.
(ಸ್ನೇಹಸೇತು : ವಿಜಯ ಕರ್ನಾಟಕ)