ಭರವಸೆ ನೀಡಿದಂತೆ ಕೆಲಸ ಮಾಡಿದ್ದೇನೆ; ಬಿ.ವೈ.ರಾಘವೇಂದ್ರ
ಇಂದು ಬೆಳಿಗ್ಗೆ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮೂರು ಬಾರಿ ರೈಲ್ವೆ ಸಚಿವರನ್ನು ಭೇಟಿ ಮಾಡಿದ್ದೆ. ಮನವಿಗಳನ್ನೂ ಸಲ್ಲಿಸಿದ್ದೆ. ಇದರ ಪರಿಣಾಮವಾಗಿ ಶಿವಮೊಗ್ಗ-ಬೆಂಗಳೂರು ಇಂಟರ್ಸಿಟಿ ರೈಲು ಹಾಗೂ ಶಿವಮೊಗ್ಗ-ಹರಿಹರ ಹೊಸ ಮಾರ್ಗದ ಸರ್ವೇ ಕುರಿತು ಬಜೆಟ್ನಲ್ಲಿ ಭರವಸೆ ಸಿಕ್ಕಿದೆ. ಮುಂದಿನ ಒಂದುವರೆ ತಿಂಗಳುಗಳಲ್ಲಿ ಶಿವಮೊಗ್ಗ-ಬೆಂಗಳೂರು ಇಂಟರ್ಸಿಟಿ ರೈಲಿನ ಉದ್ಘಾಟನೆಯನ್ನು ಸಚಿವ ಮುನಿಯಪ್ಪರವರಿಂದ ಕೈಗೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ವಿವರಿಸಿದರು.
ಶಿವಮೊಗ್ಗ-ಹರಿಹರ ರೈಲ್ವೆ ಹೊಸ ಮಾರ್ಗ ಮುಂದಿನ ಒಂದು ವರ್ಷದಲ್ಲಿ ಸರ್ವೇ ಪೂರ್ಣಗೊಳಿಸಲು ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ. ಈ ವರ್ಷದಲ್ಲಿ ಸರ್ವೇ ಮುಗಿದರೆ, ಮುಂದಿನ ಬಜೆಟ್ನಲ್ಲಿ ಈ ಮಾರ್ಗದ ನಿರ್ಮಾಣಕ್ಕೆ ಬಜೆಟ್ನಲ್ಲಿ ಹಣ ಬಿಡುಗಡೆಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ ರಾಘವೇಂದ್ರ, ಮುಂದಿನ ಬಾರಿಯಾದರೂ ತಾಳಗುಪ್ಪ-ಹೊನ್ನಾವರದ ಮೂಲಕ ಕೊಂಕಣ ರೈಲ್ವೆಗೆ ಮಲೆನಾಡನ್ನು ಜೋಡಿಸುವ ಪ್ರಾಮಾಣಿಕ ಪ್ರಯತ್ನ ನನ್ನದು. ಈ ಯೋಜನೆ ಅಂದಾಜು 800 ಕೋಟಿ ರೂ.ಗಳು ಖರ್ಚಾಗಲಿದ್ದು, ರಾಜ್ಯಕ್ಕೆ ಕೇಂದ್ರದ ರೈಲ್ವೆ ಬಜೆಟ್ನಲ್ಲಿ ಈ ವರ್ಷ ದಕ್ಕಿರುವುದೇ ಕೇವಲ 850 ಕೋಟಿ ರೂ.ಗಳು ಎಂದರು.
ಕೊಂಕಣ ರೈಲ್ವೆಗೆ ಮಲೆನಾಡಿನ ರೈಲು ಮಾರ್ಗವನ್ನು ಜೋಡಿಸುವ ಪ್ರಯತ್ನಕ್ಕಿಂತ ಮುಂಚೆ ಈ ದಾರಿಯಲ್ಲಿ ಬರುವ ಅರಣ್ಯದ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಈ ಬಗ್ಗೆ ಕೇಂದ್ರದ ಸಚಿವ ಜಯರಾಂ ರಮೇಶ್ರವರೊಂದಿಗೆ ಮಾತುಕತೆ ಮಾಡಿದ್ದೇನೆ. ಸಮಸ್ಯೆ ಬಗೆಹರಿಸುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಗಿರೀಶ್ ಪಟೇಲ್, ನಗರಸಭೆ ಅಧ್ಯಕ್ಷ ಎನ್.ಜೆ.ರಾಜಶೇಖರ್, ಬಿಜೆಪಿ ಮುಖಂಡರಾದ ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ದತ್ತಾತ್ರಿ, ಅನಂತರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.