ಮತ್ತೆ ಮುನಿಸಿಗೊಂಡ ಗೌಡರು; ದಳ ಇಬ್ಭಾಗ?
ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹಿನ್ನೆಡೆ, ಪ್ರಚಲಿತ ರಾಜಕೀಯ ವಿದ್ಯಮಾನಗಳು, ಪಕ್ಷದ ಸಂಘಟನೆ ಹಾಗೂ ಮುಂಬರುವ ಚುನಾವಣೆಗೆ ಮಾಡಬೇಕಾಗಿರುವ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ದೆಹಲಿಯಲ್ಲಿ ಇಂದು ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಕರೆಯಲಾಗಿತ್ತು. ಆದರೆ ಲೋಕಸಭಾ ಟಿಕೆಟ್ ವಂಚಿತರಾಗಿದ್ದ ಕೇರಳದ ವೀರೇಂದ್ರ ಕುಮಾರ್ ಅವರು ಎಡಪಕ್ಷಗಳಿಗೆ ಬೆಂಬಲ ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ಕ್ಯಾತೆ ತೆಗೆದಿದ್ದಾರೆ. ಅಮೆರಿಕದ ಯೇಲ್ ಕಾನೂನು ವಿವಿಯಲ್ಲಿ ಸಂಸದೀಯ ತರಬೇತಿ ಪಡೆದ ಹುರುಪಿನಿಂದ ನಿನ್ನೆಯಷ್ಟೇ ನಗರಕ್ಕೆ ಬಂದಿದ್ದ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಿದ್ದಾರೆ.
ಭಿನ್ನಮತ ತೋರುವ ನಾಯಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ದೇವೇಗೌಡರು ಆಗಲೇ ಘೋಷಿಸಿದ್ದಾರೆ. ಅಲ್ಲದೇ, ಕೇರಳದಲ್ಲಿ ಎಡಪಕ್ಷಗಳಿಗೆ ಜೆಡಿಎಸ್ ಬೆಂಬಲ ನೀಡುವ ನಿಲುವಿಗೆ ಬದ್ಧರಾಗಿರುವ ಗೌಡರು, ವೀರೇಂದ್ರ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆಗಳಿವೆ. ಕರ್ನಾಟಕದಲ್ಲಿ ಬಿಜೆಪಿ ಜತೆಯಲ್ಲಿ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಲು ಮುಂದಾದಾಗ ಇದೇ ವೀರೇಂದ್ರ ಕುಮಾರ್ ತಮ್ಮ ಅಸಮ್ಮತಿ ಸೂಚಿಸಿದ್ದರು.
ಆಡಳಿತಾರೂಢ ಎಡಪಕ್ಷಗಳನ್ನು ಬೆಂಬಲಿಸುವ ಬಗ್ಗೆ ಜುಲೈ 12ರಂದು ನಡೆಯಲಿರುವ ಕೇರಳ ಜೆಡಿಎಸ್ ಘಟಕದ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಎಂಪಿ ವೀರೇಂದ್ರ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇರಳದ ಕೋಳಿಕ್ಕೊಡ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಜೆಡಿಎಸ್ ಗೆ ಟಿಕೆಟ್ ನೀಡಲು ಎಡಪಕ್ಷಗಳು ನಿರಾಕರಿಸಿದ್ದವು. ಈ ಹಿನ್ನೆಲೆಯಲ್ಲಿ ಎಲ್ ಡಿಎಫ್ ಗೆ ಬೆಂಬಲ ನೀಡಲು ವೀರೇಂದ್ರಕುಮಾರ್ ಅಸಮ್ಮತಿದ್ದಾರೆ.
(ದಟ್ಸ್ ಕನ್ನಡವಾರ್ತೆ)