ಕೆಸರು ಕದ್ದೆಯಾಗಿರುವ ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣ
ಜಿಲ್ಲೆಯ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅವರೇ ಹೊಂದಿದ್ದಾರೆ. ಆದರೆ, ಜನತೆಯ ದೌರ್ಭಾಗ್ಯವೋ ಅಥವಾ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿಲ್ಲವೋ ಒಟ್ಟಾರೆಯಾಗಿ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ನಡೆದಾಡಲು ಪರದಾಡುವಂತಾಗಿದೆ. ನಿತ್ಯ ಇಲ್ಲಿಂದ ತೀರ್ಥಹಳ್ಳಿ, ಹೊಸನಗರ, ಉಡುಪಿ, ಮಂಗಳೂರು, ಕುಂದಾಪುರ, ಚಿತ್ರದುರ್ಗ, ದಾವಣಗೆರೆ, ಹೊನ್ನಾಳಿ ಹೀಗೆ ನಾನಾ ಭಾಗಗಳಿಗೆ ಖಾಸಗಿ ಬಸ್ಗಳು ಸಂಚರಿಸುತ್ತದೆ. ದಿನನಿತ್ಯ ಸಂಚಿಸುವ ಸಾವಿರಾರು ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ.
ಬಂದಿರುವ ಸಣ್ಣ ಮಳೆಗೇ ಕೆಸರು ಗದ್ದೆಯಂತಾಗಿ ಹೋಗಿರುವ ಬಸ್ ನಿಲ್ದಾಣ ಜಡಿಮಳೆ ಸುರಿದರೆ ಸುರಿದರೆ ಇಲ್ಲಿ ಅಡ್ಡಾಡುವುದು ಊಹಿಸುವುದೂ ಅಸಾಧ್ಯ. ದುರಂತವೇನೆಂದರೆ ಇಲ್ಲಿ ದಿನನಿತ್ಯ ಒಬ್ಬರಲ್ಲಾ ಒಬ್ಬ ಸಚಿವರು ಭೇಟಿ ನೀಡುತ್ತಲೇ ಇರುತ್ತಾರೆ. ಜೊತೆಗೆ ಬಿಜೆಪಿಯದ್ದೇ ಪ್ರಾಬಲ್ಯ. ಇಷ್ಟಿದ್ದರೂ ಖಾಸಗೀ ಬಸ್ ನಿಲ್ದಾಣ ಮಾತ್ರ ದಿಕ್ಕಿಲ್ಲದೆ ಅನಾಥವಾಗಿದೆ. ಹೀಗಿದ್ದರೂ ಪ್ರಯಾಣಿಕರು ನಿತ್ಯ ಸಂಚಾರಕ್ಕೆ ಈ ನಿಲ್ದಾಣವನ್ನೇ ಆಶ್ರಯಿಸಬೇಕಾಗಿದೆ.
ಒಂದು ಕಡೆ ಪ್ರಯಾಣಿಕರು ಕೆಸರಿನಲ್ಲಿಯೇ ಬಸ್ಗಳನ್ನು ಹತ್ತುವುದು, ಹೆಜ್ಜೆ ಇಡಲೋ ಬೇಡವೋ ಎಂಬಂತೆ ಹೆಂಗಸರು, ಮಕ್ಕಳು ಸಾಗುವುದು ಸಾಮಾನ್ಯವಾಗಿದೆ. ಮಳೆ ಬಂದರೆ ಪ್ರಯಾಣಿಕರಿಗೆ ಕೂರಲು ಜಾಗವಿಲ್ಲ. ಇದು ಜಿಲ್ಲೆಯ ಖಾಸಗಿ ಬಸ್ ನಿಲ್ದಾಣದ ಸದ್ಯದ ಸ್ಥಿತಿ. ಆಗಿರುವ ಹುಟ್ಟನ್ನು ನೋಡಿದರೆ ಸುಮ್ಮನೆ ಒಂದು ಎಕರೆ ಪ್ರದೇಶವನ್ನು ಹಾಳು ಮಾಡುವ ಬದಲು ಅಲ್ಲಿ ಭತ್ತ, ರಾಗಿ ಬೆಳೆಯುವುದಕ್ಕಾದರು ಕೊಡಮಾಡಿದರೆ ಒಳ್ಳೆಯದೇನೋ... ಕೆಸರುಗದ್ದೆ ಓಟಕ್ಕೆ ಈ ಪ್ರದೇಶ ಹೇಳಿ ಮಾಡಿಸಿದಂತಿದೆ!
ಅದಾಗದಿದ್ದಲ್ಲಿ, ಸ್ವತಃ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಂಡಿರುವ ಯಡಿಯೂರಪ್ಪನವರು ಈಗಲಾದರೂ ಖಾಸಗೀ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಹೋಗಲಾಡಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿ ಪ್ರಯಾಣಿಕರ ಗೋಳನ್ನು ತಪ್ಪಿಸಲು ಮುಂದಾಗುವರೇ?
ಚಿತ್ರ: ಕೆ.ಆರ್. ಸೋಮನಾಥ್