ಬಾಬ್ರಿ ಮಸೀದಿ ಧ್ವಂಸ, ಪಶ್ಚಾತ್ತಾಪವಿಲ್ಲ : ಉಮಾ
ಆಯೋಧ್ಯಾ ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಘಟನೆ ನಡೆದು 10 ದಿನಗಳಲ್ಲಿ ಅಂದಿನ ಕೇಂದ್ರ ಸರಕಾರದ ನಿವೃತ್ತ ನ್ಯಾಯಮೂರ್ತಿ ಎಂ ಎಸ್ ಲಿಬರ್ಹಾನ್ ನೇತೃತ್ವದ ಸಮಿತಿಯೊಂದನ್ನು ರಚಿಸಿ ಮೂರು ತಿಂಗಳೊಳಗೆ ಘಟನೆ ವಿವರ ಸಲ್ಲಿಸುವಂತೆ ಸೂಚಿಸಿತ್ತು. ಆದರೆ, ಸಮಿತಿ ವರದಿ ನೀಡುವುದನ್ನ ತುಂಬಾ ತಡಮಾಡಿದೆ. ಅದೀಗ ಸಮಿತಿ ವರದಿಯನ್ನು ಕೇಂದ್ರ ಸರಕಾರಕ್ಕೆ ನೀಡಿದೆ. ಈ ಸಮಿತಿಗೆ ಸಲ್ಲಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಉಮಾಭಾರತಿ, ಸುಮಾರು 17 ವರ್ಷಗಳ ಹಿಂದೆ ನಡೆದ ಘಟನೆಗೆ ಇಂದು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸರಕಾರ ಬಿಜೆಪಿ ಹಾಗೂ ಸಂಘ ಪರಿವಾರದ ಮೇಲೆ ಆಯೋಧ್ಯಾದ ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಮಾಡಿಕೊಳ್ಳುವ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಈ ಕಸರತ್ತು ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆ ರಾಮನ ಜನ್ಮಭೂಮಿ. ಅಲ್ಲಿ ಆತನ ಮಂದಿರ ಇರಬೇಕಾಗಿರುವದು ನೂರು ಕೋಟಿ ಹಿಂದುಗಳ ಆಶಯ. ನಾವು ಮುಂದಿನ ದಿನಗಳಲ್ಲಿ ಆಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿಯೇ ತೀರುತ್ತೇವೆ ಎಂದು ಅವರು ಮರು ಸವಾಲು ಹಾಕಿದರು. ನನ್ನನ್ನು ನೇಣಿಗೇರಿಸಿದರೂ ಸರಿ. ಕ್ಷಮೆ ಯಾಚಿಸುವುದು ಅಸಾಧ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನಡೆದಾಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣಸಿಂಗ್ ಬಿಜೆಪಿಯಿಂದ ಹೊರನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)