ಮುಖ್ಯಮಂತ್ರಿ ಕುರ್ಚಿ ಸುಭದ್ರ : ಭವಿಷ್ಯ
ಬೆಂಗಳೂರು, ಜೂ. 26 : ಅಷ್ಟಮಾಧಿಪತಿ ಚಂದ್ರ, ಲಗ್ನಾಧಿಪತಿ ಗುರುವಿಗೆ ಮಿತ್ರ. ಚಂದ್ರನು ಮಿತ್ರಸ್ಥಾನದಲ್ಲಿರುವ ಕುಜ ವೃಶ್ಚಿಕನ ಮನೆಯಲ್ಲಿದ್ದಾನೆ. ದುಸ್ಥಾನಾಧಿಪತಿ ದುಸ್ಥನದಲ್ಲೇ ಇರುವ ಚಂದ್ರನಿಂದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪೂರ್ಣಾವಧಿ ರಾಜಯೋಗ ಲಭಿಸುತ್ತದೆ ಎಂದು ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಮುಖ್ಯಮಂತ್ರಿಗಳು ಪೂರ್ಣಾವಧಿ ಆಡಳಿತ ನಡೆಸಿ ಈಡೀ ಭಾರತ ದೇಶಕ್ಕೆ ಮಾದರಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
ನೋಡಲು ಗಂಭೀರವಾಗಿ ಕೋಪಗೊಂಡವರಂತೆ ಕಂಡರೂ ಅವರು ಅತ್ಯಂತ ಸಹೃದಯಿಗಳು. ನೇರ ಹಾಗೂ ತೀಕ್ಷ್ಣ ಮಾತಿನಿಂದ ಶತ್ರುಗಳನ್ನು ಸೃಷ್ಟಿಸಿಕೊಳ್ಳುವ ಮುಖ್ಯಮಂತ್ರಿಗಳು ಮತ್ತೆ ತಮ್ಮ ಮಾತಿನಿಂದಲೇ ಇದನ್ನು ಸರಿಪಡಿಸಿಕೊಳ್ಳುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷ ಹೆಚ್ಚು ಸ್ಥಾನಗಳಿಸಲು ಯಡಿಯೂರಪ್ಪ ಅವರ ಜಾತಕದ ಮಹಾಚಂದ್ರ ದೆಸೆಯೇ ಕಾರಣ ಎಂದು ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.
ವ್ಯಯಾಧಿಪತಿ ಕುಜ ಲಗ್ನದಲ್ಲಿ ಬಂದಿರುವ ಕಾರಣ ಆರೋಗ್ಯದಲ್ಲಿ ಏರಿಳಿತವಾಗುವ ಸಾಧ್ಯತೆ ಇದೆ. ಶುಕ್ರಗ್ರಹವು ಕೇಂದ್ರಗತನಾಗಿ ಉಚ್ಚನಾಗಿರುವುದರಿಂದ ಮಾಳವ್ಯ ಯೋಗದ ಲಕ್ಷಣಗಳಿವೆ. ಹೀಗಾಗಿ ಸ್ತ್ರೀಯರಿಂದ ವಿಶೇಷ ಮಾನ್ಯತೆ ದೊರಕುತ್ತದೆ ಎಂದು ಸ್ವಾಮೀಜಿಗಳು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)