ರೆಡ್ಡಿ ವಿರುದ್ಧ ಮಾನಹಾನಿ ಕೇಸ್ : ದಿವಾಕರ್ ಬಾಬು
ಬಳ್ಳಾರಿ, ಜೂ. 26 : ದಿವಾಕರ್ ಬಾಬು ಕುಟುಂಬ ಕೊಲೆಗಡುಕ ಕುಟುಂಬ ಎಂದು ಬಹಿರಂಗ ಹೇಳಿಕೆ ನೀಡಿರುವ ಸಚಿವ ಜನಾರ್ದನರೆಡ್ಡಿ ಹೇಳಿಕೆ ತೀವ್ರ ಆಕ್ಷೇಪ ಎತ್ತಿರುವ ಕಾಂಗ್ರೆಸ್ ನಾಯಕ ದಿವಾಕರ್ ಬಾಬು, ರೆಡ್ಡಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವ ಆಧಾರದ ಮೇಲೆ ರೆಡ್ಡಿ ಕೊಲೆಗಡುಕ ಕುಟುಂಬ ಎಂದು ಆರೋಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ದಿವಾಕರ್ ಬಾಬು ಕುಟುಂಬ ಕೊಲೆಗಡುಕ ಕುಟುಂಬ. ಗಡಿ ಸರ್ವೆ ಸಂಬಂಧಿಸಿದಂತೆ ಉಪವಾಸ ನಡೆಸುತ್ತಿರುವುದು ಸ್ವಾರ್ಥ ಸಾಧನೆಗಾಗಿ ಎಂದು ಕಿಡಿಕಾರಿದ್ದರು.
ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ ಒಬ್ಬ ಮಹಾನ್ ವಂಚಕ, ಎಲ್ಲರನ್ನೂ ಭೀತಿ ಹುಟ್ಟಿಸಿ ಕಾರ್ಯ ಸಾಧಿಸಿಕೊಳ್ಳುವ ವ್ಯಕ್ತಿ ಎಂದು ಮಾಜಿ ಕಾಂಗ್ರೆಸ್ ಸಚಿವ ದಿವಾಕರ ಬಾಬು ಆರೋಪಿಸಿದ್ದಾರೆ. ಗಡಿ ಸಮೀಕ್ಷೆಗೆ ಸಿದ್ದ ಎನ್ನುವ ರೆಡ್ಡಿಯ ಈ ಹೇಳಿಕೆಯ ಹಿಂದೆ ಏನೋ ಕುತಂತ್ರ ಅಡಗಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಇದೇ ರೆಡ್ಡಿ ಈ ಹಿಂದೆ ಸಮೀಕ್ಷೆಗೆ ಬಂದ ಸರ್ವೇ ಇಲಾಖೆಯ ಅಧಿಕಾರಿಗಳಿಗೆ ಯಾವ ರೀತಿ ಬೆದರಿಕೆ ಹಾಕಿ ಅವರು ವಾಪಸ್ ಹೋಗುವಂತೆ ಮಾಡಿದ್ದಾರೆನ್ನುವುದು ನಾಡಿನ ಜನತೆ ಗೊತ್ತಿರುವ ವಿಚಾರ. ಈಗ ತನ್ನ ನಿಲುವು ಬದಲಿಸಿ ಸರ್ವೇಗೆ ಸಿದ್ದ ಎಂದು ಹೇಳಿರುವುದು ನೋಡಿದರೆ ಏನೋ ಸಂಚು ಮಾಡಿರುವಂತಿದೆ. ಈ ರೆಡ್ಡಿಗೆ ತಾಕತ್ತಿದ್ದರೆ ಸರ್ವೇ ಎಲ್ಲರ ಸಮ್ಮುಖದಲ್ಲೇ ನಡೆಯುವ೦ತೆ ಮಾಡಲಿ ನೋಡೋಣ ಎಂದು ದಿವಾಕರ ಬಾಬು ಸವಾಲೆಸಿದಿದ್ದಾರೆ.
ಗಡಿ ವಿಚಾರದಲ್ಲಿ ನನ್ನ ಹೋರಾಟ ನಿಲ್ಲುವುದಿಲ್ಲ. ಅಧಿವೇಶನದಲ್ಲಿ ಪಕ್ಷ ಈ ವಿಷಯವನ್ನು ಕೈಗೆತ್ತಿಕೊಳ್ಳಲಿದೆ. ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ಕೆಳಗಿಳಿಸುವುದಾಗಿ ಡಂಗುರ ಸಾರಿಕೊಂಡು ಬರುತ್ತಿದ್ದ ರೆಡ್ಡಿ ಈಗ ರಾಜಿಮಾಡಿಕೊಂಡಿರುದನ್ನು ನೋಡಿದರೆ, ಮುಖ್ಯಮಂತ್ರಿಗಳ ಕಾಲಿಗೆ ಬಿದ್ದು ತನಗೆ ಅನುಕೂಲವಾಗುವಂತೆ ಸರ್ವೇ ಮಾಡಿಸಿರಬಹುದು ಎಂದು ಬಾಬು ಕಿಡಿಕಾರಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)