4 ಅಲ್ಲ 40 ವರ್ಷ ನಮ್ಮದೇ ಸರಕಾರ : ರೆಡ್ಡಿ
ಬೆ೦ಗಳೂರು, ಜೂ. 25 : ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಮ್ಮ ಸರ್ವೋನ್ನತ ನಾಯಕ. ಮುಂದಿನ ನಾಲ್ಕು ವರ್ಷವಲ್ಲದೆ 40 ವರ್ಷಗಳ ಕಾಲ ನಮ್ಮದೇ ಸರಕಾರ ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ತಮ್ಮಿಂದ ಯಾವುದೇ ಅಪಾಯವಿಲ್ಲ ಎಂದರು. ಈವರೆಗೆ ಕೇವಲ ಮಾಧ್ಯಮಗಳಲ್ಲಿ ಮಾತ್ರ ಅಂತಹ ವರದಿಗಳಾಗಿವೆ. ಅದರ ಹೊರತಾಗಿ ನಾವು ಎಂದೂ ಭಿನ್ನಾಭಿಪ್ರಾಯ ಅಥವಾ ಮುಖ್ಯಮಂತ್ರಿಗಳ ಕಾರ್ಯವೈಖರಿ ಬಗ್ಗೆ ಮಾತಾಡಿಲ್ಲ ಎಂದು ಹೇಳಿದರು.
ಸಿಎಂ ಜೊತೆ ಯಾವುದೇ ವೈಷಮ್ಯವಿಲ್ಲ. ಅವರು ನಮ್ಮ ಸರ್ವೋನ್ನತ ನಾಯಕ. ಸರಕಾರ ತನ್ನ ಅಧಿಕಾರದ ಅವಧಿಯನ್ನು ಸುಗಮವಾಗಿ ಸಾಗಲಿದೆ ಎ೦ದು ರೆಡ್ಡಿ ಹೇಳಿದ್ದಾರೆ. ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆಯಲ್ಲಿ ಕೈಗೊಂಡ ಅಭಿವೃದ್ದಿ ಕೆಲಸಗಳಿಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ನನ್ನ ಇಲಾಖೆಗೆ ಸಂಬಂಧಪಟ್ಟ ಕೆಲಸಗಳನ್ನು ಸಮರ್ಪಕವಾಗಿ ಮಾಡುತ್ತಿದ್ದೇನೆ ಎನ್ನುವ ನೆಮ್ಮದಿ ನನಗಿದೆ.
(ದಟ್ಸ್ ಕನ್ನಡ ವಾರ್ತೆ)